ಶಿರಸಂಗಿ(ಸವದತ್ತಿ): ವಿಶ್ವಕರ್ಮ ಪೂಜಾ ಮಹೋತ್ಸವದ ಎರಡನೇ ದಿನವಾದ ಸೋಮವಾರ ಶಿರಸಂಗಿಯ ಕಾಳಿಕಾದೇವಿ ಸನ್ನಿದಾನದಲ್ಲಿ ಬೆಳಗಿನ ಜಾವ ವಿದ್ವಾನ ಟಿ.ವೀರರಾಘವ ಶರ್ಮಾ ಅವರ ಬ್ರಹ್ಮಸ್ಥಾನದಲ್ಲಿ ಬೆಂಗಳೂರಿನ ಚಂದ್ರೇಶ ಶರ್ಮಾ ಅವರ ಪ್ರಧಾನ ಪೌರೋಹಿತ್ಯದಲ್ಲಿ 10 ಹೋಮ ಕುಂಡದಲ್ಲಿ ಲೋಕಕಲ್ಯಾಣಾರ್ಥ ಶತ ಚಂಡಿಕಾ ಮಹಾಯಾಗ ಜರುಗಿತು.
ರಾಕ್ಷೋತ್ರ ಹೋಮ, ಅಘೋರ ಹೋಮ, ಸುದರ್ಶನ ಹೋಮ, ನವಗ್ರಹ ಹೋಮ, ಮಹಾಗಣಪತಿ ಹೋಮ, ವಾಸ್ತು ಹೋಮ, ರುದ್ರಹೋಮ, ದುರ್ಗಾ ಹೋಮ, ವಿಶ್ವಕರ್ಮ ಹೋಮ ಜರುಗಿದವು. ಸೋಮವಾರ 100 ಬಾರಿ ದೇವಿ ಪಾರಾಯಾಣ, 700 ಶ್ಲೋಕದೊಂದಿಗೆ ಶತ ಚಂಡಿಕಾ ಮಹಾಯಾಗ ಜರುಗಿತು.
ಮಹಾಯಾಗದಲ್ಲಿ ಯಾದಗಿರಿ ಏಕದಂಡಿಗಿ ಸರಸ್ವತಿ ಪೀಠದ ಶ್ರೀನಿವಾಸ ಸ್ವಾಮೀಜಿ, ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ, ಕಕಮರಿಯ ಅಭಿನವ ಗುರುಲಿಂಗ ಶ್ರೀಗಳು, ಕಾಳಿಕಾದೇವಿ ದೇವಸ್ಥಾನದ ಅರ್ಚಕರು, ಸಂಸ್ಥೆಯ ಅಧ್ಯಕ್ಷ ಪದಾಧಿಕಾರಿಗಳು, 200ಕ್ಕೂ ಹೆಚ್ಚು ದಂಪತಿ ಮಹಾಯಾಗದಲ್ಲಿ ಪಾಲ್ಗೊಂಡಿದ್ದರು.
ನಂತರ ನಡೆದ ಧಾರ್ಮಿಕ ಸಭೆಯ ಹಾಗೂ ಭೂದಾನಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನಿಡಿದ ಯಾದಗಿರಿ ಏಕದಂಡಿಗಿ ಸರಸ್ವತಿ ಪೀಠದ ಶ್ರೀನಿವಾಸ ಶ್ರೀಗಳು ಮಾತನಾಡಿ, ‘ಲೋಕಕಲ್ಯಾಣಾರ್ಥ ನಡೆದ ಶ್ರೀ ಶತ ಚಂಡಿಕಾ ಮಹಾಯಾಗ ಇಡಿ ಕ್ಷೇತ್ರದ ಸರ್ವೊತೋಮುಖ ಬೆಳವಣಿಗೆಗೆ ಶಕ್ತಿ ನೀಡಲಿದ್ದು ಲೋಕದ ಜನರ ಸಂಕಷ್ಟಗಳನ್ನು ಪರಿಹರಿಸಲಿದೆ’ ಎಂದರು.
ಚಿಕ್ಕುಂಬಿಯ ಅಭಿನವ ನಾಗಲಿಂಗ ಸ್ವಾಮೀಜಿ ಮಾತನಾಡಿ, ‘ವಿಶ್ವಕರ್ಮರ ಶಕ್ತಿ ಅಗಾಧವಾಗಿದ್ದು ಎಲ್ಲ ಸಮಾಜದ ಹಿತ ಬಯಸುವವರು’ ಎಂದರು.
ಯರಗಟ್ಟಿಯ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು, ಶಿರಸಂಗಿಯ ತ್ಯಾಗವೀರ ಲಿಂಗರಾಜ ಸ್ಮಾರಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೀರಯ್ಯ ಅದೃಶಪ್ಪನ್ನವರ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪಿ.ಬಿ.ಬಡಿಗೇರ, ಮೌನೇಶ್ವರ ಸುಳ್ಳದ, ಅಡಿಯಪ್ಪ ಬೇವೂರ, ಚಂದ್ರರಡ್ಡಿ ಹೂಲಿ, ಶ್ರರಣಗೌಡ ಪಾಟೀಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಮಲ್ಲಿಕಾರ್ಜುನ ಪತ್ತಾರ ಕಾರ್ಯಕ್ರಮ ನಿರೂಪಿಸಿದರು.
2ನೇ ದಿನವೂ ರಾಜ್ಯಮಟ್ಟದ ಪ್ರದರ್ಶನದಲ್ಲಿ ಛಾಯಾಚಿತ್ರ ಪ್ರದರ್ಶನ ಜನರ ಮನಸೆಳೆಯಿತು. ಪಾರಂಪರಿಕ ತಾಣಗಳು, ಗ್ರಾಮೀಣ ಸೊಗಡು, ಪ್ರಾಕೃತಿಕ ಛಾಯಾಚಿತ್ರಗಳು ನೋಡುಗರನ್ನು ಸೆಳೆದವು. ಇದರೊಂದಿಗೆ ಚಿತ್ರಕಲೆ, ಮಾಡರ್ನ್ ಆರ್ಟ್, ಪಾರಂಪರಿಕ ಚಿತ್ರಕಲೆ, ಕಾಷ್ಠಶಿಲ್ಪ, ಲೋಹಶಿಲ್ಪ, ಶಿಲ್ಪಕಲೆಗಳು ಜನರನ್ನು ಅನುರಂಜಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.