ಬೆಳಗಾವಿ: ‘ಖಾನಾಪುರದ ಯುವಕ ಅರ್ಬಾಜ್ ಮುಲ್ಲಾ ಕೊಲೆ ಮಾಡಿದವರಿಗೆ ಕಠಿಣ ಶಿಕ್ಷ ಆಗುವಂತೆ ನೋಡಿಕೊಳ್ಳಬೇಕು’ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಮೌಲಾನಾ ಸಲೀಂ ಮತ್ತು ಮುಫ್ತಿ ಮಂಜೂರ್ ಆಲಂ, ‘ಪ್ರಸ್ತುತ ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಲಾಗುತ್ತಿದೆ. ಇಂತಹ ಘಟನೆಗಳ ಮೂಲಕ ಸಮಾಜದ ಆರೋಗ್ಯವನ್ನು ಕೆಡಿಸಲು ಯತ್ನಿಸಲಾಗುತ್ತಿದೆ. ಅಂಥವರಿಗೆ ಗಲ್ಲು ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದರು.
ಮೊಹಮ್ಮದ್ ರಫೀಕ್ ಸಯ್ಯದ್, ‘ತಪ್ಪಿತಸ್ಥರ ವಿರುದ್ಧ ಸಂಘಟಿತ ಅಪರಾಧ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಗಲ್ಲು ಶಿಕ್ಷೆ ವಿಧಿಸಬೇಕು’ ಎಂದು ಕೋರಿದರು.
ನಗರಪಾಲಿಕೆ ಸದಸ್ಯ ಅಜೀಮ್ ಪಠವೇಗಾರ ಮಾತನಾಡಿ, ‘ಈ ಅಮಾನವೀಯ ಕೃತ್ಯ ಮಾಡಿದವರ ಹಾಗೂ ಅದಕ್ಕೆ ಪಿತೂರಿ ಮಾಡಿದವರ ಮೇಲೂ ಪೊಲೀಸರು ಕಠಿಣ ಕಾನೂನುಗಳನ್ನು ವಿಧಿಸಿ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.