ಅಥಣಿ (ಬೆಳಗಾವಿ ಜಿಲ್ಲೆ): ಕೋವಿಡ್ ಭೀತಿಯಿಂದ ಶವ ಸಂಸ್ಕಾರಕ್ಕೆ ಬಂಧುಗಳು ಕೂಡ ಹಿಂಜರಿಯುತ್ತಿರುವ ಈ ಸಂದರ್ಭದಲ್ಲಿ, ಇಲ್ಲಿನ ‘ಅಥಣಿ ಗೆಳೆಯರ ಬಳಗ’ದವರು ಈ ಸೇವೆ ಮಾಡುತ್ತಾ ಗಮನಸೆಳೆದಿದ್ದಾರೆ.
ಕೋವಿಡ್ನಿಂದ ಮೃತರಾದವರ ಅಂತ್ಯಕ್ರಿಯೆಯನ್ನು ಉಚಿತವಾಗಿ ನೆರವೇರಿಸುತ್ತಿದ್ದಾರೆ. 15 ದಿನಗಳಿಂದ ಈ ಕಾರ್ಯದಲ್ಲಿ ತೊಡಗಿದ್ದಾರೆ. ಪಿಪಿಇ ಉಡುಪು ಧರಿಸಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕೆ ಬೇಕಾಗುವ ವೆಚ್ಚವನ್ನು ತಾವಾಗಿಯೇ ಹೊಂದಿಸಿಕೊಂಡು ನಿರ್ವಹಿಸುತ್ತಿದ್ದಾರೆ. ವಿಧಿ–ವಿಧಾನಗಳಂತೆ ನೆರವೇರಿಸುತ್ತಿದ್ದಾರೆ.
‘ಕೋವಿಡ್ 2ನೇ ಅಲೆಯಲ್ಲಿ ಹಲವರು ನಿಧನರಾಗುತ್ತಿದ್ದಾರೆ. ಅವರ ಅಂತ್ಯಸಂಸ್ಕಾರಕ್ಕೆ ಕುಟುಂಬದವರಿಗೆ ಬಹಳ ತೊಂದರೆ ಆಗುತ್ತಿದೆ. ಇದನ್ನು ಗಮನಿಸಿ ನಾವು ಸೇವಾ ಕಾರ್ಯದಲ್ಲಿ ತೊಡಗಿದ್ದೇವೆ. ಗೌರವಯುತ ವಿದಾಯ ದೊರೆಯುವಂತೆ ಮಾಡಲು ಶ್ರಮಿಸುತ್ತಿದ್ದೇವೆ. ಜನರಿಗೆ ಅಳಿಲು ಸೇವೆ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ’ ಎಂದು ಬಳಗದ ಸದಸ್ಯ ಮಲ್ಲೇಶ ಪಟ್ಟಣ ತಿಳಿಸಿದರು.
‘ನಮ್ಮ ಮನೆಯ ಸದಸ್ಯರೊಬ್ಬರ ಚಿಕಿತ್ಸೆಗೆಂದು ನಮ್ಮ ಬಳಿ ಇದ್ದ ಹಣ ಖಾಲಿಯಾಗಿತ್ತು. ಅವರು ನಿಧನರಾದಾಗ ಅಥಣಿ ಗೆಳೆಯರ ಬಳಗದ ಸದಸ್ಯರು ಸ್ವಯಂಪ್ರೇರಿತವಾಗಿ ಬಂದು ಅವರ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ನಡೆಸಿಕೊಟ್ಟು ಮರೆಯಲಾರದ ಸಹಾಯ ಮಾಡಿದ್ದಾರೆ’ ಎಂದು ಮುರುಗೇಶ ಮೋಳೆ ನೆನೆದರು.
ಬಳಗದವರು, ಕೋವಿಡ್ನಿಂದ ಕೆಲಸವಿಲ್ಲದೆ ಮತ್ತು ಗಳಿಕೆ ಇಲ್ಲದೆ ಸಂಕಷ್ಟಕ್ಕೆ ಒಳಗಾದವರಿಗೆ ದಿನಸಿಯನ್ನೂ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಸಂಪರ್ಕಕ್ಕೆ ಮೊ:8546868005.