ಕಾಗವಾಡ(ಬೆಳಗಾವಿ ಜಿಲ್ಲೆ): ಪಟ್ಟಣದ ಕಾಗವಾಡ-ಗಣೇಶವಾಡಿ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 9.390 ಕೆ.ಜಿ ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ವಾಹನವನ್ನು ಪೋಲಿಸರು ಭಾನುವಾರ ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ರೆಂದಾಳದಿಂದ ಅಥಣಿ ಕಡೆಗೆ ಹೊರಟಿದ್ದ ಕಾರನ್ನು ಈ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿದಾಗ, ಬೆಳ್ಳಿಯ ಕಾಲ್ಗೆಜ್ಜೆ ಮತ್ತಿತರ ಆಭರಣ ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
₹15 ಲಕ್ಷ ನಗದು ವಶ (ಹುಬ್ಬಳ್ಳಿ ವರದಿ): ಟಿಂಬರ್ ವ್ಯಾಪಾರಿಯೊಬ್ಬರು ತಮ್ಮ ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹15 ಲಕ್ಷ ನಗದನ್ನು ನಗರದ ಕಾರವಾರ ರಸ್ತೆಯ ಚೆಕ್ ಪೋಸ್ಟ್ನಲ್ಲಿ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ ಭಾನುವಾರ ವಶಪಡಿಸಿಕೊಂಡಿದ್ದಾರೆ.
ಅಂಕೋಲಾ ಕಡೆಯಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರನ್ನು ತಡೆದ ಸಿಬ್ಬಂದಿ, ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ‘ಮರದ ವ್ಯವಹಾರಕ್ಕೆ ಸಂಬಂಧಿಸಿದ ಹಣ ಎಂದು ವ್ಯಾಪಾರಿ ವಿಚಾರಣೆ ವೇಳೆ ತಿಳಿಸಿದ್ದಾರೆ. ಈ ಕುರಿತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಅವರು ಬಂದು ವಿಚಾರಣೆ ನಡೆಸಲಿದ್ದಾರೆ’ ಎಂದು ತಹಶೀಲ್ದಾರ್ ಆರ್.ಕೆ. ಪಾಟೀಲ ತಿಳಿಸಿದ್ದಾರೆ.
ಇಸ್ತ್ರಿಪೆಟ್ಟಿಗೆ,₹16 ಲಕ್ಷ ನಗದು ವಶ (ಬಾಗಲಕೋಟೆ ವರದಿ): ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 6,798 ಇಸ್ತ್ರಿ ಪೆಟ್ಟಿಗೆ ಹಾಗೂ ₹ 16 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ನಗರದ ಹೊರವಲಯ ಮಹಾರುದ್ರಪ್ಪನನ ಹಳ್ಳದ ಬಳಿ ಭಾನುವಾರ ಲಾರಿ ತಡೆದು ಪರಿಶೀಲಿಸಿದಾಗ ಇಸ್ತ್ರಿ ಪೆಟ್ಟಿಗೆಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ₹35 ಲಕ್ಷ ಮೌಲ್ಯ ಎಂದು ಅಂದಾಜಿಸಲಾಗಿದೆ. ಸೂಕ್ತ ದಾಖಲೆ ಹೊಂದಿರದ ಕಾರಣ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಹುನಗುಂದ ತಾಲ್ಲೂಕಿನ ಗುಡೂರು ಚೆಕ್ ಪೋಸ್ಟ್ನಲ್ಲಿ ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ₹16 ಲಕ್ಷ ವಶಪಡಿಸಿಕೊಳ್ಳ
ಲಾಗಿದೆ. ಯಲಬುರ್ಗಾದ ಸುನೀಲ್ ಉಪ್ಪಾರ, ಬಸನಗೌಡ, ಕಳಕಪ್ಪ, ಹುಸೇನಸಾಬ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
₹8 ಲಕ್ಷ ನಗದು ವಶ:ಹೊಸಪೇಟೆ (ವಿಜಯನಗರ) ವರದಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದಾಖಲೆ ರಹಿತ ₹8 ಲಕ್ಷ ನಗದು ಹಣವನ್ನು ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಹೊಸಪೇಟೆ– ಶಿವಮೊಗ್ಗ ರಾಜ್ಯ ಹೆದ್ದಾರಿ 25ರ ದುಗ್ಗಾವತಿ ಚೆಕ್ ಪೋಸ್ಟ್ನಲ್ಲಿ ಸಂತೋಷ್ ಎಂಬುವರು ಮುತ್ತೂಟ್ ಫೈನಾನ್ಸ್ ಹರಿಹರ ಶಾಖೆಯಿಂದ ಬೈಕ್ನಲ್ಲಿ ₹5 ಲಕ್ಷ ತೆಗೆದುಕೊಂಡು ಹೋಗುತ್ತಿದ್ದರು. ಹಾಗೆಯೇ ದಾವಣಗೆರೆ ಜಿಲ್ಲೆಯ ಕಕ್ಕರಗೊಳ್ಳದ ತಿಮ್ಮೇಶ್ ಅವರ ಕಾರಿನಿಂದ ದಾಖಲೆಗಳಿಲ್ಲದ ₹3 ಲಕ್ಷ ಹಣ ವಶಕ್ಕೆ ತೆಗೆದುಕೊಳ್ಳಲಾಗಿದೆ.
₹6.40 ಲಕ್ಷ ನಗದು ವಶ (ಗದಗ ವರದಿ): ಗಜೇಂದ್ರಗಡ ತಾಲ್ಲೂಕಿನ ಇಳಕಲ್ ನಾಕಾ ಚೆಕ್ಪೋಸ್ಟ್ನಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹6.40 ಲಕ್ಷ ಹಣ ಹಾಗೂ ಗದಗ ತಾಲ್ಲೂಕಿನ ಮುಳಗುಂದ ಚೆಕ್ಪೋಸ್ಟ್ನಲ್ಲಿ ರಸೀದಿ ಇಲ್ಲದೇ ಸಾಗಿಸುತ್ತಿದ್ದ ₹5 ಲಕ್ಷ ಮೌಲ್ಯದ ಬಟ್ಟೆಗಳು ಹಾಗೂ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
₹42.39 ಲಕ್ಷ ಮೌಲ್ಯದ ಸೀರೆ ಅಕ್ರಮ ದಾಸ್ತಾನು ಜಪ್ತಿ (ಮುದ್ದೇಬಿಹಾಳ ವರದಿ) : ಪಟ್ಟಣದ ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ₹42.39 ಲಕ್ಷ ಮೌಲ್ಯದ ಸೀರೆಗಳನ್ನು ದಾಳಿ ನಡೆಸಿ ಪೊಲೀಸರು ಶನಿವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಹಳೇ ತಹಶೀಲ್ದಾರ್ ಕಚೇರಿ ಎದುರಿಗಿನ ಪುರಸಭೆ ಮಳಿಗೆಯ ಕಾಂಪ್ಲೆಕ್ಸ್ (ನಂ19) ಈ ದಾಸ್ತಾನು ಇಡಲಾಗಿತ್ತು.
ದಾಖಲೆ ಇಲ್ಲದ ₹ 19.98 ಲಕ್ಷ ಜಪ್ತಿ (ಕಲಬುರಗಿ ವರದಿ): ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ₹ 19.98 ಲಕ್ಷ ಹಣವನ್ನು ಇಲ್ಲಿನ ಉಪನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಆಳಂದ ಚೆಕ್ ಪೋಸ್ಟ್ ಸಮೀಪ ವಾಹನಗಳನ್ನು ತಪಾಸಣೆ ಮಾಡುವ ವೇಳೆ ಕಾರೊಂದರಲ್ಲಿ ಸುಮಾರು ₹ 19.98 ನಗದು ಇರುವುದು ಪತ್ತೆಯಾಯಿತು. ಈ ಬಗ್ಗೆ ಚಾಲಕನನ್ನು ವಿಚಾರಿಸಿದಾಗ ಯಾವುದೇ ದಾಖಲಾತಿಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ₹33 ಲಕ್ಷ ಮೌಲ್ಯದ ಅಕ್ರ ಮದ್ಯ ವಶ
ಹುಕ್ಕೇರಿ ತಾಲ್ಲೂಕಿನ ಮಹಾರಾಷ್ಟ್ರ ಕರ್ನಾಟಕ ಗಡಿಯಲ್ಲಿರುವ ಬುಗುಟೆ ಆಲೂರ ಚೆಕ್ ಪೋಸ್ಟ್ ನಲ್ಲಿ ರಾಜಸ್ತಾನ ಹಾಗೂ ಗೋವಾ ರಾಜ್ಯದ ದಾಖಲಾತಿ ಹೊಂದಿರುವ ₹33 ಲಕ್ಷ ಮೌಲ್ಯದ 450 ಲೀಟರ್ ಅಕ್ರಮ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ
ನಂದವಾಡಗಿ- 1.96 ಲಕ್ಷ ನಗದು, 156 ಸೀರೆ ವಶ (ಇಳಕಲ್ ವರದಿ): ಸಮೀಪದ ನಂದವಾಡಗಿ ಚೆಕ್ ಪೋಸ್ಟ್ ನಲ್ಲಿ ₹1.96 ಲಕ್ಷ ನಗದು ಹಾಗೂ 156 ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.