ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌: ಹೆಚ್ಚಿನ ಅರಿವು ಮೂಡಲಿ

ಆರ್‌ಸಿಯು ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ
Last Updated 5 ಫೆಬ್ರುವರಿ 2020, 14:47 IST
ಅಕ್ಷರ ಗಾತ್ರ

ಬೆಳಗಾವಿ: ‘ಕ್ಯಾನ್ಸರ್ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹೇಳಿದರು.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಎನ್‌ಎಸ್ಎಸ್‌ ಘಟಕ, ಮಹಿಳಾ ಸಬಲೀಕರಣ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಯೆನೆಪೊಯಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕ್ಯಾನ್ಸರ್‌ ಅರಿವಿಗೆ ಬಾರದಂತೆಯೇ ಬಲಿ ಪಡೆಯುತ್ತಿದೆ. ದೇಶದಲ್ಲಿ ತುಂಬಾ ವ್ಯಾಪಕವಾಗಿ ಹರಡುತ್ತಿದೆ. ಸರಿಯಾದ ತಿಳಿವಳಿಕೆ ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಸೂಕ್ತ ಸಮಯದಲ್ಲಿ ಮತ್ತು ಆರಂಭಿಕ ಹಂತದಲ್ಲಿ ರೋಗದ ಪರೀಕ್ಷೆ ನಡೆದಲ್ಲಿ ಬದುಕುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ, ಎಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದರು.

‘ರೋಗಕ್ಕೆ ತುತ್ತಾದವರು, ಬಹಳ ಹಾನಿಯಾದ ನಂತರವಷ್ಟೇ ಆಸ್ಪತ್ರೆಗೆ ಬರುವುದು ಕಂಡುಬರುತ್ತಿದೆ. ಹೀಗಾಗಿ, ಚಿಕಿತ್ಸೆ ಫಲಕಾರಿ ಆಗುತ್ತಿಲ್ಲ. ಆದ್ದರಿಂದ ಶ್ರೀಸಾಮಾನ್ಯರಿಗೂ ಅರಿವು ಮೂಡಿಸಬೇಕಾಗಿದೆ. ಇದಕ್ಕೆ ಎನ್ಎಸ್‌ಎಸ್‌ ಸೂಕ್ತ ಮಾಧ್ಯಮವಾಗಿದೆ. ವಾರ್ಷಿಕ ವಿಶೇಷ ಶಿಬಿರಗಳಲ್ಲಿ ಒಂದು ದಿನವನ್ನು ಇಂತಹ ವಿಷಯಗಳನ್ನು ಮನವರಿಕೆ ಮಾಡಿಕೊಡಲು ಮೀಸಲಿಡಬೇಕು’ ಎಂದು ಸಲಹೆ ನೀಡಿದರು.

ಯೆನೆಪೊಯಾ ವಿಶ್ವವಿದ್ಯಾಲಯದ ಆಶ್ವಿನಿ ಶೆಟ್ಟಿ, ಡಾ.ರೋಹನ್ ಥಾಮಸ್, ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಎಸ್.ಒ. ಹಲಸಗಿ ಮಾತನಾಡಿದರು.

ಕುಲಸಚಿವರಾದ ಬಸವರಾಜ ಪದ್ಮಶಾಲಿ, ಅಶೋಕ ಡಿಸೋಜಾ, ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿಗಳಾದ ನಂದಿನಿ ದೇವರಮನಿ, ಪಿ. ನಾಗರಾಜ ಉಪಸ್ಥಿತರಿದ್ದರು.

ಮಾಧುರಿ ಪ್ರಾರ್ಥಿಸಿದರು. ಸೈಲಿ ನಿರೂಪಿಸಿದರು. ಮನಿಷಾ ನೇಸರಕರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT