ಘಟಪ್ರಭಾ (ಬೆಳಗಾವಿ ಜಿಲ್ಲೆ): ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಮಹಿಳೆಯರ ಗುಂಪೊಂದು, ಇನ್ನೊಬ್ಬ ಮಹಿಳೆಯ ಕೊರಳಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದೆ. ಈ ಸಂಬಂಧ 13 ಮಂದಿ ಮಹಿಳೆಯರ ವಿರುದ್ಧ ದೂರು ದಾಖಲಾಗಿದೆ.
ರಾತ್ರಿ 9ರ ಸುಮಾರಿಗೆ ಇಲ್ಲಿನ ಮೃತ್ಯುಂಜಯ ಸರ್ಕಲ್ನಲ್ಲಿ ಸೇರಿದ ಕೆಲವು ಮಹಿಳೆಯರು ಶ್ರೀದೇವಿ ಎಂಬ ಮಹಿಳೆಯನ್ನು ತರಾಟೆ ತೆಗೆದುಕೊಂಡರು. ಚಪ್ಪಲಿ, ಬೂಟುಗಳನ್ನು ಕಟ್ಟಿ ಹಾರ ಮಾಡಿ ಕೊರಳಿಗೆ ಹಾಕಿ ರಸ್ತೆಯಲ್ಲಿ ಅವರನ್ನು ನಡೆಸಿಕೊಂಡು ಹೋದರು. ಅಸಹಾಕಳಾದ ಒಂಟಿ ಮಹಿಳೆ ರೋಧಿಸುತ್ತಲೇ ಹೆಜ್ಜೆ ಹಾಕದರು. ಕೆಲವರು ಇದರ ವಿಡಿಯೊ ಮಾಡಿದ್ದು, ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
‘ಹಲ್ಲೆಗೆ ಒಳಗಾದ ಮಹಿಳೆ ಘಟಪ್ರಭಾ ಠಾಣೆಗೆ ದೂರು ನೀಡಿದ್ದಾರೆ. 13 ಮಹಿಳೆಯರ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸಲಾಗುವುದು’ ಎಂದು ಘಟಪ್ರಭಾ ಪೊಲೀಸರು ತಿಳಿಸಿದ್ದಾರೆ.