ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಯಾದಗುಡ ಗ್ರಾಮದ ಹೊರವಲಯದ ಜಮೀನಿನಲ್ಲಿ ಭಾನುವಾರ ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ.
ಯಾದಗುಡ ಗ್ರಾಮದ ಪ್ರಕಾಶ ರಡ್ಡೆರಟ್ಟಿ ಅವರ ಪುತ್ರ ಯಮನಪ್ಪ (10) ಹಾಗೂ ಬಸಪ್ಪ ಅವರ ಪುತ್ರ ಯಶು (14) ಮೃತಪಟ್ಟವರು. ಭಾನುವಾರ ಸಂಜೆ ಕ್ರಿಕೆಟ್ ಆಡುವುದಾಗಿ ಹೇಳಿ ಮನೆಯಿಂದ ಹೋಗಿದ್ದ ಇಬ್ಬರೂ ಬಾಲಕರು ಕೃಷಿ ಹೊಂಡದ ಬಳಿ ಹೋಗಿದ್ದರು.
ಇಬ್ಬರೂ ಬಾಲಕರಿಗೆ ಈಜು ಬರುತ್ತಿರಲಿಲ್ಲ. ಯಮನಪ್ಪ ಆಟವಾಡುತ್ತ ಹೊಂಡಕ್ಕೆ ಇಳಿದ. ಅವನು ನೀರಿನಲ್ಲಿ ಮುಳುಗುವುದನ್ನು ಕಂಡು ಯಶು ರಕ್ಷಿಸಲು ಮುಂದಾದ. ಇಬ್ಬರೂ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.