ಅಥಣಿ: ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಸೋಂಕು ಹತೋಟಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿವೆ’ ಎಂದು ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಆರೋಪಿಸಿದರು.
ಇಲ್ಲಿನ ಶಿವಣಗಿ ಸಂಸ್ಕೃತಿ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ನಿಂದ ಗುರುವಾರ ಆಯೋಜಿಸಿದ್ದ ‘ಆರೋಗ್ಯ ಹಸ್ತ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬಿಜೆಪಿ ಸರ್ಕಾರಗಳು ದರಿದ್ರ ಸರ್ಕಾರಗಳಾಗಿವೆ’ ಎಂದು ದೂರಿದರು.
‘ಕೊರೊನಾದಿಂದ ಕಂಗೆಟ್ಟಿರುವ ಜನರಿಗೆ ಆತ್ಮವಿಶ್ವಾಸ ತುಂಬುವ ಸಲುವಾಗಿ ಪಕ್ಷದಿಂದ ಆರೋಗ್ಯ ಹಸ್ತ ಕಾರ್ಯಕ್ರಮ ರೂಪಿಸಲಾಗಿದೆ. ಕಾರ್ಯಕರ್ತರು ಯೋಧರಂತೆ ಕಾರ್ಯನಿರ್ವಹಿಸಿ ನೆರವಾಗಲಿದ್ದಾರೆ’ ಎಂದರು.
ಪಕ್ಷದ ಮುಖಂಡ ಗಜಾನನ ಮಂಗಸೂಳಿ, ಸಂಚಾಲಕ ಸದಾನಂದ ಡಂಗನವರ ಮಾತನಾಡಿದರು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಮೂವರನ್ನು ಆಯ್ಕೆ ಮಾಡಿ ಅವರಿಗೆ ಕಿಟ್ಗಳನ್ನು ಹಸ್ತಾಂತರಿಸಲಾಯಿತು.