ಬೆಳಗಾವಿ: ನಗರದ ಕೆಎಲ್ಇ ಸಂಸ್ಥೆಯ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ರಕ್ತದಾನ ಮಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಅಧಿಕಾರಿ ಹಾಗೂ ಶರೀರ ರಚನಾ ಶಾರೀರ ವಿಭಾಗದ ಮುಖ್ಯಸ್ಥ ಡಾ.ಮಹಾಂತೇಶ ರಾಮಣ್ಣವರ, ‘ಕೋವಿಡ್–19 ಸೋಂಕಿತ ಗರ್ಭಿಣಿಯರ ಚಿಕಿತ್ಸೆಗೆ ರಕ್ತದ ಅಗತ್ಯ ಹೆಚ್ಚಾಗಿ ಇರುತ್ತದೆ. ಕೋವಿಡ್ 2ನೇ ಅಲೆಯ ತೀವ್ರತೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಸ್ವಯಂ ಪ್ರೇರಿತ ಶಿಬಿರಗಳನ್ನು ಏರ್ಪಡಿಸಲು ಸಾಧ್ಯವಾಗುತ್ತಿಲ. ಇದನ್ನು ಮನಗಂಡು ಶಿಬಿರ ನಡೆಸಿ, ವೈದ್ಯರು ಹಾಗೂ ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ರಕ್ತ ದಾನ ಮಾಡಿಸಲಾಗಿದೆ’ ಎಂದರು.
‘ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಯಾಗಿ 2009ರಿಂದ 20 ಬಾರಿ ರಕ್ತ ದಾನ ಮಾಡಿದ್ದೇನೆ. ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ನಿಂದ ಜನ ಜಾಗೃತಿಯನ್ನೂ ಮೂಡಿಸುತ್ತಿದ್ದೇವೆ. ಕೋವಿಡ್ ರೋಗ ನಿರೋಧಕ ಲಸಿಕೆ ಹಾಕಿಸಿಕೊಂಡವರು 15 ದಿನಗಳು ಕಳೆದ ನಂತರ ರಕ್ತ ದಾನ ಮಾಡಬಹುದು’ ಎಂದು ತಿಳಿಸಿದರು.