ಬೆಳಗಾವಿ: ‘ಗಡಿ ಹಾಗೂ ಭಾಷೆ ಸಮಸ್ಯೆಯನ್ನು ಭಾವನಾತ್ಮಕವಾಗಿ ನೋಡದೆ, ಸೌಹಾರ್ದದಿಂದ ಬಗೆಹರಿಸಬೇಕು’ ಎಂದು ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗದಲ್ಲಿ ಕನ್ನಡ ಮತ್ತು ಮರಾಠಿ ಭಾಷೆಯ ಜನರು ಸೌಹಾರ್ದದಿಂದ ಬಾಳುತ್ತಿದ್ದಾರೆ. ಆದರೆ, ಕೆಲವೇ ಕೆಲವರಿಂದ ಈ ಸಂಬಂಧಕ್ಕೆ ಧಕ್ಕೆ ಆಗುತ್ತಿದೆ’ ಎಂದು ಆರೋಪಿಸಿದರು.
‘ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ನೆಲ, ಜಲದ ವಿಷಯಗಳನ್ನು ಎರಡೂ ಕಡೆಯ ಸರ್ಕಾರಗಳು ನೋಡಿಕೊಳ್ಳುತ್ತವೆ. ಹೀಗಾಗಿ, ಯಾರು ಕೂಡ ಭಾವನಾತ್ಮಕವಾಗಿ ಪ್ರಚೋದನೆಗೆ ಒಳಗಾಗಬಾರದು. ಮಸಿ ಬಳಿಯುವುದು ಅಥವಾ ಕಲ್ಲು ಎಸೆಯುವುದರಿಂದ ಪರಿಹಾರ ಸಿಗುವುದಿಲ್ಲ. ಎರಡೂ ಕಡೆಯವರಿಗೆ ಪರಸ್ಪರ ತಿಳಿವಳಿಕೆ ಬರಬೇಕು’ ಎಂದರು.