ಬೆಳಗಾವಿ: ಜಿಲ್ಲೆಯ ಯರಗಟ್ಟಿ ಬಳಿ ಬೆಳಗಾವಿ- ಬಾಗಲಕೋಟೆ ರಾಜ್ಯ ಹೆದ್ದಾರಿ ಮೇಲೆ, ರಸ್ತೆ ಬದಿ ನಿಂತಿದ್ದ ಗೂಡ್ಸ್ ಲಾರಿಗೆ ಕಾರ್ ಡಿಕ್ಕಿ ಹೊಡೆದು ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ರಾಮದುರ್ಗ ತಾಲ್ಲೂಕಿನ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಮೃತಪಟ್ಟವರು.
ಲಾರಿ ಚಾಲಕ ವಾಹನವನ್ನು ರಸ್ತೆ ಪಕ್ಕ ನಿಲ್ಲಿಸಿ ಹಿಂಬದಿಯಲ್ಲಿ ಹಗ್ಗ ಕಟ್ಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ನೇರವಾಗಿ ಲಾರಿ ಹಿಂಬದಿಗೆ ಗುದ್ದಿತು. ಎರಡೂ ವಾಹನಗಳ ಮಧ್ಯೆ ಸಿಲುಕಿದ ರಂಗಪ್ಪ ಕ್ಷಣಾರ್ಧದಲ್ಲಿ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಅಮರೆಗೌಡ ಮಾಲಿಪಾಟೀಲ (58) ಗೌಡಪ್ಪಗೌಡ ಮಾಲಿಪಾಟೀಲ (25) ಅವರಿಗೆ ತೀವ್ರ ಗಾಯಗೊಂಡಿದ್ದು, ವೀರಭದ್ರಗೌಡ ಡಬಿ (32), ಹನುಮಂತ ಬೆಟಗೇರಿ (23) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಎಲ್ಲರೂ ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ನಿವಾಸಿಗಳು.
ಅಪಘಾತದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು.