ಯಮಕನಮರಡಿ: ‘ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರು ಕೆಲಸದ ಅವಧಿಯಲ್ಲಿ ತಮ್ಮ ಮಕ್ಕಳನ್ನು ಬಿಡಲು ಕೂಸಿನ ಮನೆ ಅವಕಾಶ ಕಲ್ಪಿಸಲಾಗಿದೆ’ ಎಂದು ಚಿಕ್ಕೋಡಿ ಸಿಡಿಪಿಒ ಇಲಾಖೆಯ ಹಿರಿಯ ಮೇಲ್ವಿಚಾರಕಿ ಭಾರತಿ ಹೆದ್ದುರಶೆಟ್ಟಿ ಹೇಳಿದರು.
ಅವರು ಸ್ಥಳೀಯ ಹತ್ತರಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನಂದಪೂರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಉದ್ಯೋಗ ಖಾತರಿ ಕೂಲಿ ಕಾರ್ಮಿಕರ ಮೂರು ವರ್ಷದೊಳಗಿನ ಮಕ್ಕಳ ಆರೈಕೆಗೆ ಪ್ರಾರಂಭಿಸಿರುವ ಕೂಸಿನ ಮನೆ ಉದ್ಘಾಟಿಸಿ ಮಾತನಾಡಿದರು.
‘ಕೂಸಿನ ಮನೆ ನರೇಗಾ ಕೂಲಿ ಕಾರ್ಮಿಕರಿಗೆ ಅನುಕೂಲವಾಗಲಿದೆ. ಹತ್ತನೇ ತರಗತಿ ಮುಗಿಸಿದ 4 ಜನ ಮಹಿಳಾ ಸಿಬ್ಬಂದಿಯನ್ನು ನೇಮಕ ಮಾಡಿ ಅವರಿಗೆ ತರಬೇತಿ ನೀಡಲಾಗಿದೆ’ ಎಂದರು.
ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯ ಮಹಾದೇವ ಪಟೋಳಿ, ನೇಕಾರ ಸಮಾಜದ ಯುವ ನೇತಾರ ಬಸವರಾಜ ಅತ್ತೀಮರದ, ಪ್ರಕಾಶ ಬಿಸಿರೊಟ್ಟಿ, ಹತ್ತರಗಿ ಗ್ರಾ.ಪಂ ಅಧ್ಯಕ್ಷರು, ಪಿಡಿಒ, ಜನಪ್ರತಿನಿಧಿಗಳು ಇದ್ದರು.