ಬೆಳಗಾವಿ: ಇಲ್ಲಿನ ಸುಭಾಷ್ ನಗರದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದಲ್ಲಿ ಮುಗಳಖೋಡ ಜಿಡಗಾ ಮಠ, ಡಿವೈನ್ ಚಾರಿಟಬಲ್ ಟ್ರಸ್ಟ್ ಹಾಗೂಸ್ವಾಮಿ ವಿವೇಕಾನಂದ ಪ್ರತಿಷ್ಠಾನ ಸಹಯೋಗದಲ್ಲಿ ಮಂಗಳವಾರ ಅನಾಥ ಮಕ್ಕಳೊಂದಿಗೆ ದೀಪಾವಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮುಗಳಖೋಡ ಜಿಡಗಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ನಾವು ಜಾತಿ ಮತ್ತು ಧರ್ಮದ ಸಂಕೋಲೆಯಿಂದ ಹೊರಬಂದು ಮೊದಲು ಮಾನವರಾಗಬೇಕು. ಹಬ್ಬ-ಹರಿದಿನಗಳ ವೇಳೆ ಸಂಕಷ್ಟದಲ್ಲಿರುವರಿಗೆ ಸಹಾಯಹಸ್ತ ಚಾಚಬೇಕು. ಸಂಭ್ರಮವನ್ನು ಇತರರಿಗೂ ಹಂಚಬೇಕು. ಆಗ ನಮ್ಮ ಬದುಕು ಸಾರ್ಥಕವಾಗುತ್ತದೆ’ ಎಂದು ಹೇಳಿದರು.
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ‘72 ಮಕ್ಕಳನ್ನು ಪೋಷಿಸುತ್ತಿರುವ ಈ ಕೇಂದ್ರದ ಕಾರ್ಯ ಶ್ಲಾಘನೀಯ. ಮಕ್ಕಳ ಬೆಳವಣಿಗೆಗೆ ಅಗತ್ಯ ಸಹಕಾರ ನೀಡುತ್ತೇನೆ’ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮುಖಂಡರಾದ ರಾಜು ಚಿಕ್ಕನಗೌಡರ, ದೀಪಕ ಗುಡಗನಟ್ಟಿ, ಅನಂತ ಬ್ಯಾಕೋಡ, ಚಲನಚಿತ್ರ ನಟ ಅಕ್ಷಯ ಚಂದ್ರಶೇಖರ ಇದ್ದರು.