ಬೆಳಗಾವಿ: ತಮ್ಮನ್ನು ಸಾರಿಗೆ ನೌಕರರೆಂದು ಪರಿಗಣಿಸಿ, ಅವರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಎನ್ಡಬ್ಲ್ಯುಕೆಎಸ್ಆರ್ಟಿಸಿ) ನೌಕರರು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.
ಆಂಧ್ರಪ್ರದೇಶ ಸರ್ಕಾರದ ಮಾದರಿಯನ್ನು ಇಲ್ಲೂ ಅನುಸರಿಸಬೇಕು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಭರವಸೆ ಈಡೇರಿಸಬೇಕು ಎಂದು ಕೋರಿದರು.
‘ಸಾರಿಗೆ ಸಂಸ್ಥೆಯು ರಾಜ್ಯದ ಜೀವನಾಡಿಯಾಗಿದೆ. ಜನಸಾಮಾನ್ಯರಿಗೆ ಸೇವೆ ಒದಗಿಸುತ್ತಿರುವ ಪ್ರಮುಖ ಇಲಾಖೆ ನಮ್ಮದಾಗಿದೆ. ಇಲ್ಲಿನ ಸಿಬ್ಬಂದಿ ಹಗಲಿರುಳೂ ದುಡಿಯುತ್ತಿದ್ದಾರೆ. ಆದರೆ, ಸಾರಿಗೆ ನೌಕರರಿಗಿಂತ ಕಡಿಮೆ ಸೌಲಭ್ಯ ಹಾಗೂ ಸಂಬಳ ದೊರೆಯುತ್ತದೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ’ ಎಂದು ತಿಳಿಸಿದರು.
ಇನ್ನೊಂದೆಡೆ, ನಿಗಮದ ಇಲ್ಲಿನ ಎಲ್ಲ ಘಟಕದವರು ಪತ್ರ ಚಳವಳವಳಿ ನಡೆಸಿದರು. ಪತ್ರಗಳ ಮುಖಾಂತರ ತಮ್ಮ ಅಳಲನ್ನು ಮುಖ್ಯಮಂತ್ರಿಗೆ ಕಳುಹಿಸುವ ಚಳವಳಿ ಇದಾಗಿದೆ.