‘ಹೋದ ವರ್ಷ ಜ.17ರಂದು ಕೋವಿಡ್ ನಡುವೆಯೂ ಬಿಜೆಪಿಯವರು ಸಮಾವೇಶ ನಡೆಸಿದ್ದರು. ಅಮಿತ್ ಶಾ, ಅಂದಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಸಚಿವರು ಮತ್ತು ಆ ಪಕ್ಷದ ಶಾಸಕರು ಭಾಗವಹಿಸಿದ್ದರು. ಗ್ರಾಮ ಪಂಚಾಯ್ತಿಗಳ ಸದಸ್ಯರು ಸೇರಿದಂತೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿದ್ದರು. ಆ ವೇಳೆಯೂ ಕೋವಿಡ್ ಹೆಚ್ಚಿತ್ತು. ನಿತ್ಯ ನೂರಾರು ಜನರು ಸಾವಿಗೀಡಾಗುತ್ತಿದ್ದರು. ಸಮಾವೇಶ ರದ್ದುಪಡಿಸುವಂತೆ ಮಾಡಿಕೊಂಡಿದ್ದ ಮನವಿಗೆ ಸ್ಪಂದನೆ ದೊರೆತಿರಲಿಲ್ಲ. ಆಗ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸದಿದ್ದರೆ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.