ಬೆಳಗಾವಿ: ‘ನಾಲ್ಕು ವರ್ಷದಿಂದ ನಡೆದಿರುವ ಮತ್ತು ಮುಂದಿನ ಒಂದು ತಿಂಗಳಲ್ಲಿ ನಡೆಯಲಿರುವ ಕಾಮಗಾರಿಗಳು ಬೆಳಗಾವಿ ಗ್ರಾಮೀಣ ಕ್ಷೇತ್ರದ ಇತಿಹಾಸದಲ್ಲೇ ವಿನೂತನ ದಾಖಲೆ ಬರೆಯಲಿವೆ’ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ತಾಲ್ಲೂಕಿನ ಸಾಂಬ್ರಾದಿಂದ ಅಷ್ಟೆ ಗ್ರಾಮದವರೆಗೆ ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗದ ₹ 41 ಲಕ್ಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಹಿಂದಿನಿಂದಲೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಾ ಬಂದಿದ್ದರೆ ಇಷ್ಟೊಂದು ಹಿಂದುಳಿಯುತ್ತಿರಲಿಲ್ಲ. ಹೆಸರಿಗಷ್ಟೆ ಜನಪ್ರತಿನಿಧಿಗಳಾದರೆ ವಿನಃ ಜನರ ಕಷ್ಟ–ಸುಖಕ್ಕೆ ಆಗಲಿಲ್ಲ. ಹಾಗಾಗಿ ಈಗ ಮಾಡಲು ಸಾಕಷ್ಟು ಕೆಲಸಗಳಿವೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಎಲ್ಲ ಇಲಾಖೆಗಳಿಂದಲೂ ಅನುದಾನ ತರುತ್ತಿದ್ದಾರೆ. ಹೋರಾಟ ಮಾಡಿ ಯೋಜನೆಗಳನ್ನು ತಂದು ಕೆಲಸ ಮಾಡಿಸುತ್ತಿದ್ದಾರೆ. ಇದು ಕ್ಷೇತ್ರದ ಇತಿಹಾಸದಲ್ಲಿ ಹಿಂದೆಂದೂ ಆಗಿರಲಿಲ್ಲ’ ಎಂದರು.
‘ಮುಂದಿನ ದಿನಗಳಲ್ಲಿ ಸಾಕಷ್ಟು ಯೋಜನೆಗಳನ್ನು ತರುವ ಕನಸನ್ನು ಶಾಸಕರು ಹೊಂದಿದ್ದಾರೆ. ನಾನೂ ವಿಧಾನಪರಿಷತ್ ಸದಸ್ಯನಾಗಿ ಆಯ್ಕೆ ಆಗಿರುವುದರಿಂದ ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ಧಿ ಮಾಡುವ ಅವಕಾಶ ಸಿಕ್ಕಿದೆ’ ಎಂದು ಹೇಳಿದರು.