ಚಿಕ್ಕೋಡಿ: ‘ಶಿಕ್ಷಣ ಕೇವಲ ಅಂಕ ಗಳಿಕೆ ಆಧರಿತ ಆಗಿರಬಾರದು. ಜ್ಞಾನದೊಂದಿಗೆ ಕೌಶಲ ವೃದ್ಧಿ ಮಾಡುವಂಥ ಶಿಕ್ಷಣ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದು’ ಎಂದು ಖಡಕಲಾಟ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಕೇಶ ಚಿಂಚಣಿ ಹೇಳಿದರು.
ತಾಲ್ಲೂಕಿನ ಕುಪ್ಪಾನವಾಡಿ ಗ್ರಾಮದಲ್ಲಿ ವಿಶ್ವ ಶಿಕ್ಷಣ ಸಂಸ್ಥೆಯ ಮುರುಘೇಂದ್ರ ವಸತಿ ಶಾಲೆಯ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಗಡಿ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಲ್ಲಿ ಮುರುಘೇಂದ್ರ ವಸತಿ ಶಾಲೆ ಯಶಸ್ವಿಯಾಗಿದೆ. ನಿಸರ್ಗದ ಮಧ್ಯದಲ್ಲಿರುವ ಈ ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಇಲ್ಲಿ ಹೇಳಿ ಮಾಡಿಸಿದ ವಾತಾವರಣವಿದೆ’ ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಪಿ.ಧರಿಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ, ನವೋದಯ, ಸೈನಿಕ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಸಂಚಾಲಕಿ ಕೆ.ಕೆ. ಧರಿಗೌಡರ, ಖಡಕಲಾಟ ಗ್ರಾ.ಪಂ ಉಪಾಧ್ಯಕ್ಷ ಕುಮಾರ ಪಾಟೀಲ, ಓಂ ಧರಿಗೌಡರ, ಅಂಕುಶ ಕೋಳಿ ಮುಂತಾದವರು ಇದ್ದರು.