ಬೆಳಗಾವಿ: ‘ಕೇಂದ್ರದಂತೆ ರಾಜ್ಯ ಸರ್ಕಾರವೂ ಮೂರು ಕೃಷಿ ಕಾಯ್ದೆಗಳನ್ನು ಶಾಸನಬದ್ಧವಾಗಿ ವಾಪಸ್ ಪಡೆಯಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ರೈತರು ಸೋಮವಾರ ಬಾರುಕೋಲು ಚಳವಳಿ ನಡೆಸಿದರು.
ಇಲ್ಲಿನ ಕನ್ನಡ ಸಾಹಿತ್ಯ ಭವನದ ಆವರಣ ಹಾಗೂ ರಾಣಿ ಚನ್ನಮ್ಮ ವೃತ್ತದಲ್ಲಿ ಬಾರುಕೋಲುಗಳ ಜೊತೆ ಪ್ರತಿಭಟಿಸುತ್ತಿದ್ದ ಅವರನ್ನು ಪೊಲೀಸರು, ಸುವರ್ಣ ವಿಧಾನಸೌಧ ಸಮೀಪದ ಸುವರ್ಣ ಗಾರ್ಡನ್ ಬಳಿಯ ಪ್ರತಿಭಟನಾ ಪೆಂಡಾಲ್ಗೆ ಬಸ್ಗಳಲ್ಲಿ ಕರೆದೊಯ್ದರು.
ಅಲ್ಲಿ ಮಾತನಾಡಿದ ಕೋಡಿಹಳ್ಳಿ, ‘ನಾನು ದೆಹಲಿ ವರಿಷ್ಠರ ನಿರ್ದೇಶನದಂತೆ ಅಧಿಕಾರ ನಡೆಸುತ್ತಿದ್ದೇನೆ. ಕುರ್ಚಿ ಬಿಡುವುದಕ್ಕೆ ಆಗುವುದಿಲ್ಲ. ರೈತರಿಗೆ ಏನೂ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗವಾಗಿ ಹೇಳಿಬಿಡಲಿ’ ಎಂದು ಕೋಡಿಹಳ್ಳಿ ವಾಗ್ದಾಳಿ ನಡೆಸಿದರು.
‘ಕಾಯ್ದೆಗಳನ್ನು ಕೇಂದ್ರ ಸರ್ಕಾರವೇ ವಾಪಸ್ ಪಡೆದಿರುವಾಗ, ರಾಜ್ಯ ಸರ್ಕಾರಕ್ಕೆ ಏನಾಗಿದೆ?’ ಎಂದು ಕೇಳಿದರು.
‘ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಯನ್ನು ಶಾಸನಬದ್ಧಗೊಳಿಸಬೇಕು. ಪ್ರವಾಹ ಹಾಗ ಅತಿವೃಷ್ಟಿಯಿಂದ ಅಪಾರ ಹಾನಿಯಾಗಿದ್ದು, ರೈತರಿಗೆ ಕೂಡಲೇ ಸಮರ್ಪಕ ಪರಿಹಾರ ಕೊಡಬೇಕು’ ಎಂದು ಒತ್ತಾಯಿಸಿದರು.