ಬೆಳಗಾವಿ: ‘ಹೊರವಲಯದಲ್ಲಿ ಕೈಗೊಂಡಿರುವ ಹಲಗಾ-ಮಚ್ಚೆ ಬೈಪಾಸ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.
‘ಕಾರ್ಯಾದೇಶ ಇಲ್ಲದೆ ಕಾಮಗಾರಿ ಆರಂಭಿಸಿರುವುದು ಸರಿಯಲ್ಲ. ಈ ರಸ್ತೆ ನಿರ್ಮಾಣದಿಂದ ಫಲವತ್ತಾದ ಕೃಷಿ ಜಮೀನು ಕಳೆದುಕೊಂಡು ನಾವು ಬೀದಿಗೆ ಬೀಳಬೇಕಾಗುತ್ತದೆ. ಹೀಗಾಗಿ, ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದರು.
‘ಬುಡಾದಿಂದ ನಿವೇಶನ ಅಭಿವೃದ್ಧಿಪಡಿಸಲು ಕೃಷಿ ಜಮೀನುಗಳನ್ನು ವಶಪಡಿಸಿಕೊಳ್ಳುವ ಯೋಜನೆಗಳನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಬಳಿಕ ಹಲಗಾ ಬಳಿ ಕಾಮಗಾರಿ ಸ್ಥಳದಲ್ಲೂ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರವಿ ಬ. ಸಿದ್ದಮ್ಮನವರ ನೇತೃತ್ವ ವಹಿಸಿದ್ದರು.