ನಿಪ್ಪಾಣಿ: ತಾಲ್ಲೂಕಿನ ಕುರ್ಲಿ, ಅಪ್ಪಾಚಿವಾಡಿ, ಭಾಟನಾಂಗನೂರು ಗ್ರಾಮಗಳಲ್ಲಿಯ ರೈತರು ಹಾಗೂ ಗ್ರಾಮಸ್ಥರು ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ನಗರದ ಹೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
‘ವಿದ್ಯುತ್ ಪೂರೈಕೆ ಸರಿಯಾಗಿಲ್ಲ. ಆಗಾಗ ವಿದ್ಯುತ್ ಕೈಕೊಟ್ಟು ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ನದಿಯಲ್ಲಿ ನೀರಿದ್ದರೂ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ತೀವ್ರ ತೊಂದರೆ ಅನುಭವಿಸಬೇಕಾಗಿದೆ. ಇದಲ್ಲದೇ ಕುರ್ಲಿಯಲ್ಲಿ ಲೈನ್ಮನ್ಗಳು ಕೆಲಸಕ್ಕೆ ಬರುತ್ತಿಲ್ಲ ಆದ್ದರಿಂದ ಕೂಡಲೇ ಅವರನ್ನು ಬದಲಾಯಿಸಿ ವಾರದೊಳಗೆ ಕಾಯಂ ಲೈನ್ಮನ್ ನೇಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ರೈತರು ಹಾಗೂ ಹೊಲದ ವಿದ್ಯುತ್ ಮೋಟಾರು ಮಾಲೀಕರ ಸಂಘದ ಸದಸ್ಯರ ಒತ್ತಾಯಕ್ಕೆ ಮಣಿದು ಒಂದು ವಾರದೊಳಗೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಎಂಜಿನಿಯರ್ ಅಕ್ಷಯ ಚೌಗಲೆ ಭರವಸೆ ನೀಡಿದರು.
ಮನವಿಯನ್ನು ತಹಸೀಲ್ದಾರ್ ಕಚೇರಿಯ ಗ್ರೇಡ್ 2 ತಹಸೀಲ್ದಾರ್ ಪ್ರವೀಣ ಕಾರಂಡೆ ಅವರಿಗೂ ನೀಡಲಾಯಿತು. ಅಮರ ಶಿಂತ್ರೆ, ಶ್ರೀನಿವಾಸ ಪಾಟೀಲ, ಸುಖದೇವ ಮಗದುಮ, ಕೆ.ಡಿ. ಪಾಟೀಲ, ಕುಮಾರ ಮಾಳಿ, ಪ್ರೊ. ಎನ್.ಐ. ಖೋತ, ಕಲಗೊಂಡಾ ಕೋಟಗೆ, ನವನಾಥ ಗಾರಗೋಟೆ, ಹರಿ ನಿಕಾಡೆ, ದೀಪಕ ಪಾಟೀಲ ಇದ್ದರು.