ಗೋಕಾಕ: ಇಲ್ಲಿನ ವಿವೇಕಾನಂದ ನಗರ ಬಡಾವಣೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಬಿಸಿಯೂಟ ಅಡುಗೆ ಕೋಣೆಯಲ್ಲಿ ಸೋಮವಾರ, ಅಡುಗೆ ಮಾಡುತ್ತಿರುವಾಗ ಸಿಲಿಂಡರ್ ಸ್ಫೋಟಗೊಂಡಿದೆ. ಕೋಣೆಯ ಬಾಗಿಲು, ಬಾಗಿಲು ಹಾಗೂ ಆಹಾರ ಧಾನ್ಯಗಳು ಸುಟ್ಟುಹೋಗಿವೆ. ಅದೃಷ್ಟವಶಾತ್ ಜಿವ ಹಾನಿ ಆಗಿಲ್ಲ.
ಎಂದಿನಂತೆ ಸೋಮವಾರ ಮಧ್ಯಾಹ್ನ ಅಡುಗೆ ಮಾಡುವಾಗ ಸಿಲೆಂಡರ್ಗೆ ಬೆಂಕಿ ಹೊತ್ತಿಕೊಂಡಿತು. ಇದರಿಂದ ಅಡುಗೆ ಸಿಬ್ಬಂದಿ ಹೆದರಿ ಕೋಣೆಯಿಂದ ಹೊರಗೆ ಓಡಿದರು. ಕೆಲವೇ ಕ್ಷಣಗಳಲ್ಲಿ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಕೋಣೆಯ ತುಂಬ ಆವರಿಸಿತಿ.
ಶಾಲೆಯಲ್ಲಿ ಅಗ್ನಿ ನಂದಿಸುವ ಗ್ಯಾಸ್ ಇತ್ತು. ಅದರಿಂದ ಯತ್ನಿಸಿದರೂ ಸಾಧ್ಯವಾಗಲಿಲ್ಲ. ನಂತರ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಬೆಂಕಿ ನಂದಿಸಿ ಇತರ ಕೋಣೆಗಳಿಗೆ ಹರಡುವುದನ್ನು ತಡೆದರು.
ಸಿಲಿಂಡರ್ನ ರೆಗ್ಯುಲೇಟರ್ ಸಡಿಲವಾಗಿದೆ. ಇದರ ಮೂಲಕ ಪೈಪಿನಲ್ಲಿ ಸೋರಿಕೆ ಉಂಟಾಗಿದ್ದು, ಅದಕ್ಕೆ ತಗಲಿದ ಬೆಂಕಿಯಿಂದ ಸಿಲಿಂಡರ್ ಸ್ಫೋಟವಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ವಿಠ್ಠಲ ಗುಡೆನ್ನವರ ತಿಳಿಸಿದರು.
ಅಡುಗೆ ಕೋಣೆಯಲ್ಲಿ ಶೇಖರಿಸಿ ಇಡಲಾಗಿದ್ದ ಅಕ್ಕಿ, ಬೇಳೆ, ಹಾಲಿನ ಪೌಡರ್, ಮಕ್ಕಳಿಗೆ ನೀಡಲು ತಯಾರಿಸಿದ್ದ ದೋಸೆ ಸೇರಿದಂತೆ ಪಾತ್ರೆಗಳು ಹಾಗೂ ಇತರೆ ಪರಿಕರಗಳು ಹಾನಿಗೊಳಗಾಗಿವೆ.
ಘಟನೆ ಸಂಭವಿಸಿದ ಬಹು ಹೊತ್ತಿನ ತನಕವೂ ಬಿಸಿಯೂಟ ಅಧಿಕಾರಿ ಸೇರಿದಂತೆ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು– ಆಟೊ ಅಪಘಾತ: ವ್ಯಕ್ತಿ ಸಾವು
ನಿಪ್ಪಾಣಿ: ತಾಲ್ಲೂಕಿನ ಕೊಗನೋಳಿ ಬಳಿ ಕಾರು ಮತ್ತು ಗುಡ್ಸ್ ಅಟೊ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಗಾಯಗೊಂಡಿದ್ದಾರೆ.
ಸೌಂದಲಗಾ ನಿವಾಸಿ ದಿಲೀಪ ಸಾಂಗಾವೆ ವಯಸ್ಸು (42)) ಮೃತರಾಗಿದ್ದು, ವಸಂತ ರಣದಿವೆ ಅವರಿಗೆ ಗಾಯಗಳಾಗಿವೆ. ನಿಪ್ಪಾನಿಯ ಮಹಾತ್ಮ ಗಾಂಧಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ರಾಜೀವ್ ಗಾಂಧಿನಗರ ಬಳಿ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಕೊಗನೋಳಿ ಠಾಣೆಯ ಪೊಲೀಸ್ರು ಭೇಟಿ ನೀಡಿದರು.
ಕಾರ್– ಬೈಕ್ ಡಿಕ್ಕಿ: ಯುವಕ ಸಾವು
ರಾಮದುರ್ಗ: ತಾಲ್ಲೂಕಿನ ಮುಳ್ಳೂರ ಘಾಟ್ನಲ್ಲಿ ಸೋಮವಾರ ಬೈಕ್ ಹಾಗೂ ಬುಲೆರೊ ವಾಹನದ ನಡುವೆ ಡಿಕ್ಕಿ ಸಂಭವಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಸವಾರ ಗಾಯಗೊಂಡಿದ್ದಾರೆ.
ಮುಳ್ಳೂರ ಗ್ರಾಮದ ನಿವಾಸಿ ಶಿವಾನಂದ ಹನಮಂತ ಕುಂಬಾರ (28) ಮೃತಪಟ್ಟವರು. ರಾಮದುರ್ಗದಿಂದ ಮುಳ್ಳೂರು ಕಡೆಗೆ ಬೈಕ್ನಲ್ಲಿ ಹೊರಟಿದ್ದರು. ಆಗ ಎದುರಿನಿಂದ ಬಂದ ಬುಲೆರೊ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.