ಬೆಳಗಾವಿ: ಬೇರೆ ವೃತ್ತಗಳಂತೆ ತಮಗೂ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿ ಕಿರಿಯ ಅರಣ್ಯ ರಕ್ಷಕರು ಕೆಲಸಕ್ಕೆ ಹಾಜರಾಗದೆ ಇಲ್ಲಿನ ಅರಣ್ಯ ಇಲಾಖೆ ಕಚೇರಿಯ ಕಾರಿಡಾರ್ನಲ್ಲಿ ಪೆಟ್ರೋಲ್ ಮತ್ತು ವಿಷದ ಬಾಟಲಿ ಇಟ್ಟುಕೊಂಡು ಮಂಗಳವಾರ ಧರಣಿ ನಡೆಸಿದರು.
‘ಬೇರೆ ವೃತ್ತದವರು ಉಪ ವಲಯ ಅರಣ್ಯಾಧಿಕಾರಿಗಳಾಗಿ ನಮ್ಮ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ. ಮಾನಸಿಕ ವೇದನೆ ಅನುಭವಿಸುತ್ತಿದ್ದೇವೆ’ ಎಂದು ತಿಳಿಸಿದರು.
‘ಬಹುತೇಕ ವೃತ್ತಗಳಲ್ಲಿ ನೇಮಕವಾದ ಒಂದೇ ವರ್ಷದಲ್ಲಿ ಬಡ್ತಿ ಹೊಂದಿ ಉಪವಲಯ ಅರಣ್ಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ನಾವಿನ್ನೂ ರಕ್ಷಕರಾಗಿಯೇ ಉಳಿದಿದ್ದೇವೆ’ ಎಂದು ಅಳಲು ತೋಡಿಕೊಂಡರು
‘ಈ ಬಗ್ಗೆ ಮನವಿ ಸಲ್ಲಿಸಿದ್ದರೂ, ಹೋರಾಟ ನಡೆಸಿದ್ದರೂ ಸ್ಪಂದನೆ ಸಿಗದಿರುವುದು ನೋವು ತಂದಿದೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು’ ಎಂದು ತಿಳಿಸಿದರು.
ಮನವಿ ಸ್ವೀಕರಿಸಿದ ಅಧಿಕಾರಿಗಳು, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ವಹಿಸುವುದಾಗಿ ಭರವಸೆ ನೀಡಿದರು.