ಬೆಳಗಾವಿ: ‘ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಉಪಾಹಾರ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ನನಗೆ ಹುಷಾರೂ ಇಲ್ಲ. ಬೆಳಗಾವಿಯಲ್ಲಿ ಇರುವುದರಿಂದ ಅದರಲ್ಲಿ ಭಾಗವಹಿಸಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
’ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಗೆ ಏಕೆ ಹಾಜರಾಗಿಲ್ಲ’ ಎಂಬ ಮಾಧ್ಯದಮವರ ಪ್ರಶ್ನೆಗೆ, ಇಲ್ಲಿ ಶನಿವಾರ ಅವರು ಹೀಗೆ ಪ್ರತಿಕ್ರಿಯಿಸಿದರು.
‘ಅವಕಾಶ ಕೊಟ್ಟರೆ ನಾನೂ ಮುಖ್ಯಮಂತ್ರಿಯಾಗುತ್ತೇನೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಪಾಟೀಲ, ‘ಪ್ರಿಯಾಂಕ್ ಅವರ ಹೇಳಿಕೆಯನ್ನು ನೀವು ತಪ್ಪಾಗಿ ಗ್ರಹಿಸಿದ್ದೀರಿ. ಅವರು ತಾವಾಗಿಯೇ ಮಾಧ್ಯಮದವರ ಮುಂದೆ ಬಂದು ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಲ್ಲ. ನೀವು ಪದೇಪದೆ ಪ್ರಶ್ನಿಸಿದಾಗ, ಅವಕಾಶ ಸಿಕ್ಕರೆ ನಾನೂ ಮುಖ್ಯಮಂತ್ರಿಯಾಗುತ್ತೇನೆ ಎಂದಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾವುದೇ ಭಿನ್ನಮತ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ರಾಜ್ಯದ ಅಭಿವೃದ್ಧಿಯೇ ನಮ್ಮ ಪಕ್ಷದ ಧ್ಯೇಯ’ ಎಂದು ಹೇಳಿದರು.
‘ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ?’ ಎಂಬ ಪ್ರಶ್ನೆಗೆ, ಉತ್ತರಿಸಲು ಅವರು ನಿರಾಕರಿಸಿದರು.