ಎಂ.ಕೆ.ಹುಬ್ಬಳ್ಳಿ(ಬೆಳಗಾವಿ ಜಿಲ್ಲೆ): ಇಲ್ಲಿನ ಸಂಬಣ್ಣವರ ಓಣಿಯ ಹನುಮಂತ ದೇವಸ್ಥಾನದ ಬಳಿ ಇತ್ತೀಚೆಗೆ ತೆರವುಗೊಳಿಸಿದ್ದ ಭಗವಾ ಧ್ವಜ ಮರುಸ್ಥಾಪನೆಗಾಗಿ ಹಿಂದೂಪರ ಸಂಘಟನೆಯ ಯುವಕರು ಜಾಥಾ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಇಲ್ಲಿ ತೆರವುಗೊಳಿಸಿದ ಭಗವಾ ಧ್ವಜ ಮರುಸ್ಥಾಪನೆಗಾಗಿ ಜಾಥಾ ಹಮ್ಮಿಕೊಂಡಿದ್ದ ಹಿಂದೂ ಸಂಘಟನೆಯವರು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಸಮುದಾಯದವರು ಇದರಲ್ಲಿ ಪಾಲ್ಗೊಳ್ಳುವಂತೆ ಕೋರಿದ್ದರು.
ಹಾಗಾಗಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದಲ್ಲಿ ಪೊಲೀಸ್ ಸರ್ಪಗಾವಲು ಹಾಕಿ, ಜಾಥಾ ನಡೆಸಲು ಅವಕಾಶ ನೀಡಲಿಲ್ಲ.
'ಹನುಮ ದೇವಸ್ಥಾನದ ಬಳಿ ಮೊದಲಿನಿಂದಲೂ ಭಗವಾ ಧ್ವಜವಿದೆ. ಅದರ ಮರುಸ್ಥಾಪನೆಗೆ ಅವಕಾಶ ನೀಡಬೇಕು' ಎಂದು ಸ್ಥಳೀಯರು ಪಟ್ಟಣ ಪಂಚಾಯ್ತಿಗೆ ಮನವಿ ಸಲ್ಲಿಸಿದರು.
ಇಲ್ಲಿಗೆ ಭೇಟಿ ನೀಡಿದ ಎಸ್ಪಿ ಡಾ.ಭೀಮಾಶಂಕರ ಗುಳೇದ, 'ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ' ಎಂದು ಭರವಸೆ ನೀಡಿದರು.