ಬೆಳಗಾವಿ: ‘ಜನಮಾನಸದಿಂದ ದೂರ ಸರಿಯುತ್ತಿರುವ ಜಾನಪದ ಮತ್ತು ಧಾರ್ಮಿಕ ಗೀತೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ‘ಜಿನ ಭಜನಾ ಸ್ಪರ್ಧೆ’ಗಳನ್ನು ಆಯೋಜಿಸುವುದು ಶ್ಲಾಘನೀಯವಾಗಿದೆ‘ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಧನ್ಯಕುಮಾರ ಗುಂಡೆ ಹೇಳಿದರು.
ಭಾರತೀಯ ಜೈನ ಮಿಲನ ವಲಯ-8ರ ವತಿಯಿಂದ ಇಲ್ಲಿನ ರಾಮನಗರದ ಧರ್ಮನಾಥ ಭವನದಲ್ಲಿ ಆಯೋಜಿಸಿದ್ದ ಧಾರವಾಡ ವಿಭಾಗ ಮಟ್ಟದ ‘ಜಿನಭಜನಾ ಸ್ಪರ್ಧೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮೊಬೈಲ್ ಫೋನ್ ಹಾವಳಿಯಿಂದ ಜನಪದ ಮತ್ತು ಭಕ್ತಿಗೀತೆಗಳು ನಶಿಸಿ ಹೋಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಜಿನಭಕ್ತಿ ಗೀತೆಗಳು, ಜೈನ ಆರತಿ ಪದಗಳು, ಸೋಬಾನೆ ಪದಗಳು, ಜಾನಪದ ಗೀತೆಗಳನ್ನು ಪುನಶ್ಚೇತನಗೊಳಿಸಿ ಮುಂದಿನ ಪಿಳಿಗೆಗೆ ಉಡುಗೊರೆಯಾಗಿ ನೀಡುವ ದೃಷ್ಷಿ ಹೊಂದಿರುವುದು ಮಾದರಿಯಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಭರತೇಶ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ದೊಡ್ಡಣ್ಣವರ, ‘ಜಿನ ಭಜನಾ ಸ್ಪರ್ಧೆಯ ಮೂಲಕ ಇಂದು ಮನೆ ಮನೆಗಳಲ್ಲಿ ಧಾರ್ಮಿಕ ವಾತಾವರಣ ಮೂಡುತ್ತಿದೆ. ಈ ರೀತಿಯ ಕಾರ್ಯಕ್ರಮಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ’ ಎಂದು ನುಡಿದರು.
ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಅಧ್ಯಕ್ಷ ಪುಷ್ಪಕ ಹನಮಣ್ಣವರ, ಡಾ.ಪಿ.ಜಿ. ಕೆಂಪಣ್ಣವರ ಮಾತನಾಡಿದರು.
ಧಾರವಾಡ ವಲಯದ ಅಧ್ಯಕ್ಷ ಜೀವಂಧರ ಕುಮಾರ, ಗೌರವ ಅಧ್ಯಕ್ಷ ಗುಣಪಾಲ ಹೆಗ್ಗಡೆ, ಕೆಜಿಎ ಸದಸ್ಯ ಅಶೋಕ ಜೈನ, ಸನ್ಮತಿ ಕಸ್ತೂರಿ, ಮಹಾಮಿತ್ರ ಉಪಾಧ್ಯ, ಪ್ರಶಾಂತ ಉಪಾಧ್ಯೆ, ಎಸ್.ಎಂ. ಕಗಣಗೌಡ್ರ, ಡಾ.ಉದಯಾ ಪಾಟೀಲ, ಅಣ್ಣಾಸಾಹೇಬ ಚೌಗುಲೆ ಇದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕುಂತಿನಾಥ ಕಲಮನಿ ಹಾಗೂ ಪದ್ಮರಾಜ ವೈಜಣ್ಣವರ ಅವರನ್ನು ಸತ್ಕರಿಸಲಾಯಿತು.
ಜೈನ ಮಿಲನ ಮಧ್ಯವರ್ತಿ ಸಮಿತಿಯ ಕಾರ್ಯದರ್ಶಿ ಡಾ.ನಾಗರಾಜ ಮರೆಣ್ನವರ ಸ್ವಾಗತಿಸಿದರು. ನಮಿತಾ ಪರಮಾಜ ನಿರೂಪಿಸಿದರು. ಅಜಿತ ಕುಮಾರ ವಂದಿಸಿದರು.