ಸಂಕೇಶ್ವರ: ‘ಮುಸ್ಲಿಂ ದೇಹ- ಕನ್ನಡ ಮನಸ್ಸು ಹೊಂದಿರುವ ಬೆಳಗಾವಿ ಹತ್ತಿರದ ಸಿಂದೊಳ್ಳಿಯ ಸನದಿ ಕುಟುಂಬ ಕನ್ನಡ ಸಾಹಿತ್ಯ ಮತ್ತು ಶಿಕ್ಷಣಕ್ಕೆ ಅಪಾರ ಕೊಡುಗೆ ನೀಡಿದೆ’ ಎಂದು ಹಿರಿಯ ಡಾ.ಬಸವರಾಜ ಜಗಜಂಪಿ ಹೇಳಿದರು.
ಅವರು ಸಂಕೇಶ್ವರದಲ್ಲಿ ಕವಿ ಅಕ್ಬರ ಸನದಿ ಅವರಿಗೆ ಅಭಿನಂದನೆ ಸಮಾರಂಭ ಹಾಗೂ ‘ನಾದ ನಿನಾದ’ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
‘ಕೈಗಾರಿಕಾ ಘಟಕದಲ್ಲಿ ಹಗಲಿರಳು ಕೆಲಸ ಮಾಡುತ್ತಾ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ತಂದಿರುವ ಸನದಿ ಅವರು ಇಂದಿನ ಪೀಳಿಗೆಯವರಿಗೆ ಮಾದರಿ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಶೋಧಕ ಡಾ.ರಾಮಕೃಷ್ಣ ಮರಾಠೆ ಮಾತನಾಡಿ, ‘ಗಡಿನಾಡಿನ ಹಳ್ಳಿಯಿಂದ ಬಂದ ಸನದಿ ಕುಟುಂಬದ 6 ಜನ ಸದಸ್ಯರು ಕನ್ನಡ ಸಾಹಿತ್ಯದಲ್ಲಿ ವಿವಿಧ ಕೃತಿಗಳನ್ನು ಹೊರ ತಂದಿರುವುದು ಐತಿಹಾಸಿಕ ಕೆಲಸ. ಭಾಷೆ, ಧರ್ಮ ಹಾಗೂ ಜಾತಿಯ ಹೆಸರಿಲ್ಲಿ ಸಮಾಜ ಒಡೆದು ಹೋಗುತ್ತಿರುವಾಗ ಸನದಿ ಕುಟುಂಬದ ಸದಸ್ಯರು ಎಕತ್ವದ ಕಲ್ಪನೆಯಲ್ಲಿ ಸಾಹಿತ್ಯ ಕೃತಿಗಳನ್ನು ರಚಿಸಿರುವುದು ಸಂತಸದ ಸಂಗತಿ’ ಎಂದರು.
ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ‘ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಂದೆ-ತಾಯಿಗಳ ಜವಾಬ್ದಾರಿ ಬಹು ದೊಡ್ಡದು. ಸನದಿ ಸಹೋದರರ ತಂದೆ ಕಲಾವಿದರಾಗಿದ್ದರಿಂದ ತಮ್ಮ ಮಕ್ಕಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿಯನ್ನು ತುಂಬಿದರು. ಬಡತನವೇ ಬದುಕಿನ ಸಾಧನೆಗೆ ಮಾರ್ಗದರ್ಶಿಯಾಗಿರುತ್ತದೆ. ಅಂಥ ನೆಲೆಯಿಂದ ಬಂದ ಅಕಬರ ಸನದಿ ಅವರ ಕಾರ್ಯ ಶ್ಲಾಘನೀಯ’ ಎಂದರು.
ಎ.ಎ.ಸನದಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮ ಜರುಗಿತು.
ಸಂಕೇಶ್ವರದಲ್ಲಿ ಕವಿ ಅಕಬರ ಸನದಿ ಅವರ ಅಭಿನಂದನೆ ಸಮಾರಂಭದಲ್ಲಿ ‘ನಾದ ನಿನಾದ’ ಗ್ರಂಥವನ್ನು ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.