ಬೆಳಗಾವಿ: ‘ಹುಕ್ಕೇರಿ ತಾಲ್ಲೂಕಿನ ಮಣಗುತ್ತಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ತೆರವು ವಿಷಯದಲ್ಲಿ ಸತ್ಯಾಸತ್ಯತೆ ಅರಿಯದೆ ಕರ್ನಾಟಕ ಸರ್ಕಾರದ ವಿರುದ್ಧ ಟ್ವೀಟ್ ಮಾಡಿರುವ ಖಾನಾಪುರ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಬಹಿರಂಗ ಕ್ಷಮೆ ಯಾಚಿಸಬೇಕು’ ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಕನ್ನಡ ಸಾಹಿತ್ಯ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಅವರು, ಶಾಸಕಿ ವಿರುದ್ಧ ಧಿಕ್ಕಾರ ಕೂಗಿದರು. ಅವರ ಫೋಟೊಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಗುಡಗನಟ್ಟಿ ಮಾತನಾಡಿ, ‘ಶಾಸಕರು ಸರ್ಕಾರದ ವಿರುದ್ಧ ಟ್ವೀಟ್ ಮಾಡುವ ಮೂಲಕ ಉಂಡ ಮನೆಗೆ ದ್ರೋಹ ಬಗೆದಿದ್ದಾರೆ. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಶಿವಾಜಿಗೆ ನಮ್ಮ ಸರ್ಕಾರ ಅಪಾರ ಗೌರವ ನೀಡಿದೆ. ಕರ್ನಾಟಕ ಕೊಟ್ಟಷ್ಟು ಗೌರವವನ್ನು ಮಹಾರಾಷ್ಟ್ರ ಸರ್ಕಾರವೂ ನೀಡಿಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಅಂಜಲಿ ಅವರು ಇದನ್ನು ಅರಿಯಬೇಕು. ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ತಿಳಿಸಿದರು.
ರಾಜ್ಯ ಸಂಚಾಲಕ ಮಹಾದೇವ ತಳವಾರ, ದಶರಥ ಬನೋಶಿ, ಕಸ್ತೂರಿ ಬಾವಿ, ಆರೋಗ್ಯಪ್ಪ ಪಾದನಕಟ್ಟಿ, ಸುರೇಶ ಗವಣ್ಣವರ, ಗಣೇಶ ರೋಕಡೆ, ಹೊಳೆಪ್ಪ ಸುಲದಾಳ, ವಿಜಯ ಹಲಕರ್ಣಿ, ಸಂಪತ ಸಕ್ರೆನ್ನವರ, ಸತೀಶ ಗಾಡಿವಡ್ಡರ, ರಮೇಶ ಯರಗಣ್ಣವರ, ಕಿರಣ ಚವಾಣ ಇದ್ದರು.