ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಪೂರ್ವ ತಯಾರಿ ಮಾಡಿಕೊಂಡಿದ್ದು ರಣರಂಗ ಸಜ್ಜಾಗಿದೆ. ಕಾರ್ಯಕರ್ತರು ಅಭೂತಪೂರ್ವವಾಗಿ ಕೆಲಸ ಮಾಡುತ್ತಿದ್ದಾರೆ. ಟಿಕಟ್ ಹಂಚಿಕೆ ವಿಚಾರದಲ್ಲಿ ಯಾರಿಗೂ ಯಾವುದೇ ಅಸಮಾಧಾನ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದರು.
ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನನುಭವಿ ಹೆಣ್ಮಗಳಿಂದ ಏನು ಮಾಡಲು ಸಾಧ್ಯ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಅವರಿಗೆ ಹೆಣ್ಣು ಮಕ್ಕಳ ಮೇಲಿರುವ ಗೌರವ ಈ ಮೂಲಕ ಪ್ರಕಟವಾಗಿದೆ. ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ’ ಎಂದು ದೂರಿದರು.
‘ರಾಜೀವ್ ಗಾಂಧಿ ಪ್ರೀತಿ ಮಾಡಿ ಮದುವೆ ಆದ ಕಾರಣಕ್ಕೆ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷ ನಡೆಸಲು ಸಾಧ್ಯವಿದ್ದರೆ, ಸೋನಿಯಾ ಗಾಂಧಿ ಹೊಟ್ಟೆಯಲ್ಲಿ ಹುಟ್ಟಿದ ಕಾರಣಕ್ಕೆ ರಾಷ್ಟ್ರ ನಡೆಸಲು ಪ್ರಿಯಾಂಕಾ ಗಾಂಧಿ ರೆಡಿ ಇರುವುದಾದರೆ, ಮಂಗಲಾ ಅಂಗಡಿ ಅವರಿಬ್ಬರಿಗಿಂತಲೂ ಹೆಚ್ಚು ಅನುಭವಿ ಎನ್ನುವುದನ್ನು ಸಿದ್ದರಾಮಯ್ಯ ತಿಳಿದುಕೊಳ್ಳಲಿ. ಹಲವು ವಿದ್ಯಾಸಂಸ್ಥೆ ನಡೆಸುತ್ತಿರುವ ಮಂಗಲಾ ಅವರು ಹೆಚ್ಚು ಅನುಭವಿ’ ಎಂದು ತಿರುಗೇಟು ನೀಡಿದರು.
‘ಕಾಂಗ್ರೆಸ್ ಪಕ್ಷ ಸರ್ಕಸ್ ಕಂಪನಿ ಆಗಿದೆ. ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರದ್ದು ಒಂದೊಂದು ಗ್ಯಾಂಗ್ ಆಗಿದೆ. ಈ ಸರ್ಕಸ್ ಕಂಪನಿ ಸರಿ ಮಾಡಲೆಂದೇ ಸೋನಿಯಾ ಗಾಂಧಿ ಸುರ್ಜೇವಾಲ ಅವರನ್ನು ಕಳುಹಿಸಿಕೊಟ್ಟಿದ್ದಾರೆ’ ಎಂದು ವ್ಯಂಗ್ಯವಾಡಿದರು.