ಬೆಳಗಾವಿ: ‘ಗುತ್ತಿಗೆದಾರ ಸಂತೋಷ್ ಪಾಟೀಲ ಅವರಿಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಹಾಗೂ ಮತ್ತೊಬ್ಬ ಪ್ರಭಾವಿ ಶಾಸಕ ಧಮ್ಕಿ ಕೊಟ್ಟಿದ್ದರು ಎಂಬ ಮಾಹಿತಿ ನನಗೆ ತಿಳಿದುಬಂದಿದೆ’ ಎಂದು ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸ್ಫೋಟಕ ಹೇಳಿಕೆ ನೀಡಿದರು.
ಇಲ್ಲಿ ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪಕ್ಷದಿಂದ ನಡೆಸಿದ ಪ್ರತಿಭಟನೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾರ್ಯಾರು ಧಮಕಿ ಕೊಟ್ಟಿದ್ದರು ಎನ್ನುವ ವಿವರವನ್ನು ಪಕ್ಷದ ನಾಯಕರು ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರೆ’ ಎಂದರು.
‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದ ಗುತ್ತಿಗೆದಾರ ಸಂತೋಷ್ ಪಾಟೀಲ ಸಾವಾಗಿದೆ. ಇಡೀ ಕಾಂಗ್ರೆಸ್ ಪಕ್ಷ ಸಂತೋಷ್ ಕುಟುಂಬದ ಜೊತೆಗಿದೆ. ಇದು ರಾಜಕೀಯವಲ್ಲ. ಸಾವಿನ ಮನೆಯಲ್ಲಿ ರಾಜಕಾರಣ ಮಾಡುವ ಅನಿವಾರ್ಯ ನಮ್ಮ ಪಕ್ಷಕ್ಕೆ ಬಂದಿಲ್ಲ. ಆ ಅನಿವಾರ್ಯ ಬಿಜೆಪಿಯವರಿಗೆ ಇರಬಹುದು’ ಎಂದು ಟೀಕಿಸಿದರು.