ಬೆಳಗಾವಿ: ‘ಐದು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡ ‘ಲಕ್ಷ್ಮಿತಾಯಿ ಸೌಹಾರ್ದ ಸಹಕಾರಿ ನಿಯಮಿತ’ ಅಸ್ತಿತ್ವಕ್ಕೆ ಬಂದಿದೆ. ಈ ಮೂಲಕ ಇಲ್ಲಿನ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸಹಕಾರ ರಂಗಕ್ಕೂ ಅಧಿಕೃತವಾಗಿ ಪ್ರವೇಶ ಪಡೆದಿದ್ದಾರೆ.
ಈ ಸಹಕಾರಿಯು ಸವದತ್ತಿಯಲ್ಲಿ ಆಡಳಿತ ಕಚೇರಿ ಹೊಂದಿರಲಿದೆ. ಸಂಸ್ಥೆಯು ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ ಹಾಗೂ ಧಾರವಾಡ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ.
ಆಡಳಿತ ಮಂಡಳಿಯ ನಿರ್ದೇಶಕರ ಮೊದಲ ಸಭೆ ಗುರುವಾರ ನಡೆಯಿತು. ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ಲಕ್ಷ್ಮಿ ಹೆಬ್ಬಾಳಕರ ಸಹೋದರ ಚನ್ನರಾಜ ಬಿ. ಹಟ್ಟಿಹೊಳಿ ಹಾಗೂ ಉಪಾಧ್ಯಕ್ಷರನ್ನಾಗಿ ಮಹಾಂತೇಶ ವಿ. ಮತ್ತಿಕೊಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಲಕ್ಷ್ಮಿ ಅವರನ್ನು ಸಂಸ್ಥೆಗೆ ಗೌರವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
‘ಶೀಘ್ರವಾಗಿ ಸವದತ್ತಿ ಪಟ್ಟಣದಲ್ಲಿ ಆಡಳಿತ ಕಚೇರಿಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹರ್ಷ ಸಕ್ಕರೆ ಕಾರ್ಖಾನೆಯ ರೈತರ ಜೊತೆಗೆ, ಸಾರ್ವಜನಿಕರಿಗೂ ಅನುಕೂಲ ಕಲ್ಪಿಸಲು ಈ ಸಂಸ್ಥೆಯನ್ನು ಆರಂಭಿಸಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಅಧ್ಯಕ್ಷ ಚನ್ನರಾಜ ಹಟ್ಟಿಹೊಳಿ ವಿನಂತಿಸಿದ್ದಾರೆ.