ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಣು ಬಿಗಿದು ಪ್ರೇಮಿಗಳ ಆತ್ಮಹತ್ಯೆ

Last Updated 15 ಮೇ 2019, 16:50 IST
ಅಕ್ಷರ ಗಾತ್ರ

ತೆಲಸಂಗ (ಅಥಣಿ ತಾಲ್ಲೂಕು): ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಇಲ್ಲಿಗೆ ಸಮೀಪದ ಕೊಟ್ಟಲಗಿ ಗ್ರಾಮದ ಅನ್ಯಕೋಮಿಗೆ ಸೇರಿದ ಪ್ರೇಮಿಗಳಿಬ್ಬರು ಬುಧವಾರ ಮರವೊಂದಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಪ್ರಿತಾ ಸಿದ್ದಪ್ಪ ಕೊಂಡಿ (21) ಹಾಗೂ ಅದೇ ಗ್ರಾಮದ ಅಲ್ಲಾಭಕ್ಷ ಇಬ್ರಾಹಿಂ ಸನದಿ (23) ಆತ್ಮಹತ್ಯೆಗೆ ಶರಣಾದವರು. ಇವರಿಬ್ಬರೂ ವಾರದ ಹಿಂದೆ ಮನೆ ತೊರೆದು, ಕಣ್ಮರೆಯಾಗಿದ್ದರು. ಇಲ್ಲಿಗೆ ಸಮೀಪದ ವಿಜಯಪುರ ಜಿಲ್ಲೆಯ ತಿಕೋಟ ಪೊಲೀಸ್‌ ಠಾಣೆ ವ್ಯಾಪ್ತಿಗೆ ಒಳಪಡುವ ಕೊಟ್ಟಲಗಿ ಗದ್ದೆಯ ಬೇವಿನ ಮರವೊಂದರಲ್ಲಿ ಬೆಳಿಗ್ಗೆ ಇವರಿಬ್ಬರ ಶವಗಳು ನೇತಾಡುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಬಾಲ್ಯವಿವಾಹ?:

ಸುಪ್ರಿತಾ ಅವರನ್ನು ಬಾಲ್ಯದಲ್ಲಿಯೇ ಬೇರೊಬ್ಬರ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಆದರೆ, ಈ ವಿವಾಹ ತಮಗೆ ಇಷ್ಟವಿಲ್ಲ, ತನ್ನನ್ನು ಈ ಮದುವೆ ಬಂಧದಿಂದ ಮುಕ್ತಗೊಳಿಸಿ ಎಂದು ಸುಪ್ರಿತಾ ಐಗಳಿ ಠಾಣೆಯಲ್ಲಿ ಲಿಖಿತ ಅರ್ಜಿ ನೀಡಿದ್ದರು. ವಿಜಯಪುರದ ಶಾಲೆಯೊಂದರಲ್ಲಿ ಅರೆಕಾಲಿಕ ಶಿಕ್ಷಕನಾಗಿರುವ ಅಲ್ಲಾಭಕ್ಷ ಜೊತೆ ವಿವಾಹ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿದೆ.

ತಮ್ಮ ಮದುವೆಗೆ ಕುಟುಂಬದ ಸದಸ್ಯರು ಒಪ್ಪಿಗೆ ಸೂಚಿಸುವುದಿಲ್ಲವೆಂದು ಹತಾಶರಾಗಿ ಪ್ರೇಮಿಗಳಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಆತ್ಮಹತ್ಯೆ ಅಲ್ಲ– ದೂರು:

‘ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ಪ್ರಕರಣದ ಬಗ್ಗೆ ತನಿಖೆ ನಡೆಸಿ, ಸತ್ಯಾಸತ್ಯತೆ ಬಹಿರಂಗಪಡಿಸಿ’ ಎಂದು ಅಲ್ಲಾಭಕ್ಷ ಪೋಷಕರು ತಿಕೋಟಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯಪುರ ಡಿವೈಎಸ್‍ಪಿ ಪಿ.ಅಶೋಕ, ಗ್ರಾಮೀಣ ವೃತ್ತ ಸಿಪಿಐ ಶಂಕರಗೌಡ ಪಾಟೀಲ, ಅಥಣಿ ಸಿಪಿಐ ಅಲಿಸಾಬ, ಐಗಳಿ ಪಿಎಸ್‍ಐ ರಮೇಶ ಆವಜಿ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT