ಬೆಳಗಾವಿ: ‘ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ 20 ಸ್ಥಾನ ಗೆಲ್ಲಲೇಬೇಕು. ಬೆಳಗಾವಿ, ಚಿಕ್ಕೋಡಿ ಅಭ್ಯರ್ಥಿಗಳನ್ನು ಘೋಷಿಸಲು ಇನ್ನೊಂದು ತಿಂಗಳಲ್ಲಿ ಸಭೆ ನಡೆಸುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಲೋಕಸಭೆ ಚುನಾವಣೆಗೆ ಪ್ರಿಯಾಂಕಾ ಜಾರಕಿಹೊಳಿ ಸ್ಪರ್ಧಿಸುತ್ತಾರೆಯೇ ಎಂಬ ಪ್ರಶ್ನೆಗೆ, ‘ಆ ವಿಷಯವನ್ನು ಪಕ್ಷದ ಮುಖಂಡರು ತೀರ್ಮಾನಿಸುತ್ತಾರೆ. ಲೋಕಸಭೆ ಚುನಾವಣೆಯ ಸಭೆ ಬಳಿಕ ಇದು ಸ್ಪಷ್ಟವಾಗಿ ಗೊತ್ತಾಗಲಿದೆ’ ಎಂದು ಉತ್ತರಿಸಿದರು.
‘ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಳಗಾವಿ-ಮುಂಬೈ ಕಾರ್ಯಾಚರಣೆ ನಡೆಸಬೇಕು. ಈ ಕುರಿತಾಗಿ ಚರ್ಚಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬೆಳಗಾವಿ ನಗರದಲ್ಲಿ ಕೈಗೆತ್ತಿಕೊಂಡ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಈಗ ಅವುಗಳನ್ನು ಪೂರ್ಣಗೊಳಿಸಿ, ಉದ್ಘಾಟಿಸುತ್ತೇವೆ’ ಎಂದರು.