ಬೆಳಗಾವಿ: ‘ಇಲ್ಲಿ ಮರಾಠಿ ನಾಮಫಲಕಗಳನ್ನು ಅಳವಡಿಸಲು ಅವಕಾಶ ನೀಡಬೇಕು’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಶಿವಸೇನಾ ಮುಖಂಡರು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಎಂಇಎಸ್ ಮುಖಂಡ ಶುಭಂ ಶೇಳಕೆ ಮಾತನಾಡಿ, ‘ಮರಾಠಿಯಲ್ಲಿ ಫಲಕಗಳನ್ನು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಈ ಪ್ರಕಾರ ಅನುವು ಮಾಡಿಕೊಡಬೇಕು. ಶಿವಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಶಿರೋಳಕರ ಕಾರಿನಲ್ಲಿ ಅಳವಡಿಸಿದ್ದ ಮರಾಠಿ ಫಲಕ ಕಿತ್ತೆಸೆದ ಕರವೇ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮರಾಠಿ ಭಾಷಿಗರಾದ ನಮಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಈ ವಿಷಯ ಮಹಾನಗರಪಾಲಿಕೆ ವ್ಯಾಪ್ತಿಗೆ ಬರುತ್ತದೆ. ಮನವಿಯನ್ನು ಅಲ್ಲಿನ ಆಯುಕ್ತರಿಗೆ ಕಳುಹಿಸಿಕೊಡಲಾಗುವುದು’ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಶಿವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಶಿರೋಳಕರ, ಮುಖಂಡರಾದ ಅರವಿಂದ ನಾಗನೂರಿ, ಭಂಡು ಕೇರವಾಡ್ಕರ, ರಂಜಿತ ಪಾಟೀಲ, ಪ್ರವೀಣ ತೇಜಂ ಇದ್ದರು.