ಬೆಳಗಾವಿ: ‘ಜಿಲ್ಲೆಯ ವಿವಿಧೆಡೆ ಹಮ್ಮಿಕೊಂಡಿರುವ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಅನುಮತಿ ನೀಡಬೇಕು ಮತ್ತು ಶಾಂತಿಯುತವಾಗಿ ಆಯೋಜಿಸುವುದಕ್ಕೆ ಯಾವುದೇ ಆಕ್ಷೇಪಗಳನ್ನು ವ್ಯಕ್ತಪಡಿಸಬಾರದು’ ಎಂದು ಒತ್ತಾಯಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಹಾಗೂ ಬಾಲಭೀಮ ಸಾಹಿತ್ಯ ಸಂಘಟನೆ ಸದಸ್ಯರು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ಗಡಿ ಭಾಗದಲ್ಲಿ 35 ವರ್ಷಗಳಿಂದ ಮರಾಠಿ ಸಾಹಿತ್ಯ ಸಮ್ಮೇಳನವನ್ನು ಶಾಂತಿಯುತವಾಗಿ ಹಾಗೂ ಯಾರನ್ನೂ ನೋಯಿಸದಂತೆ ನಡೆಸಿಕೊಂಡು ಬಂದಿದ್ದೇವೆ. ಸಂಸ್ಕೃತಿ ಪಸರಿಸುವ ಈ ಕಾರ್ಯಕ್ರಮಕ್ಕೆ ಅಡ್ಡಿಪಡಿಸಬಾರದು’ ಎಂದು ಕೋರಿದರು.
‘ಈಚೆಗೆ ತಾಲ್ಲೂಕಿನ ಕುದ್ರೆಮನಿ ಹಾಗೂ ಖಾನಾಪುರ ತಾಲ್ಲೂಕಿನ ಇದ್ದಿಲಹೊಂಡದಲ್ಲಿ ಆಯೋಸಿದ್ದ ಸಮ್ಮೇಳನವನ್ನು, ಪೊಲೀಸರ ಮಧ್ಯಪ್ರವೇಶದಿಂದಾಗಿ ಸುಗಮವಾಗಿ ನಡೆಸುವುದಕ್ಕೆ ಸಾಧ್ಯವಾಗಿಲ್ಲ. ಸಾಹಿತಿಗಳು ಪಾಲ್ಗೊಳ್ಳುವುದಕ್ಕೆ ಪೊಲೀಸರು ಅವಕಾಶ ಕೊಟ್ಟಿಲ್ಲ. ಈ ಮೂಲಕ ನಮ್ಮ ಭಾವನೆಯನ್ನು ಕೆಣಕಿದ್ದಾರೆ. ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ’ ಎಂದು ದೂರಿದರು.
‘ಜಿಲ್ಲಾಡಳಿತವು ನಿರ್ಬಂಧಗಳನ್ನು ಹೇರದೇ ಸಮ್ಮೇಳನ ನಡೆಸಲು ಅನುಮತಿ ನೀಡಬೇಕು’ ಎಂದು ಕೋರಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಸರಸ್ವತಿ ಪಾಟೀಲ, ಮಾಲೋಜಿ ಅಷ್ಟೇಕರ, ಮನೋಹಕ ಕಿನೇಕರ, ದೀಪಕ ದಳವಿ, ನಾಗೇಶ ಸಾತೇರಿ ಇದ್ದರು.