ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆ ಎದುರು ಕನ್ನಡಪರ ಸಂಘಟನೆಗಳವರು ಸ್ಥಾಪಿಸಿರುವ ಕನ್ನಡ ಧ್ವಜ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯಿಂದ ಅ.18ರಂದು ಪ್ರತಿಭಟನೆ ನಡೆಸಲು ಮುಖಂಡರು ನಿರ್ಧರಿಸಿದ್ದಾರೆ.
ಇಲ್ಲಿ ಮಂಗಳವಾರ ಸಭೆ ನಡೆಸಿದ ಮುಖಂಡರು, ‘ಪಾಲಿಕೆ ಎದುರಿನ ಕನ್ನಡ ಧ್ವಜ ತೆಗೆಯಬೇಕು. ಇಲ್ಲವೇ ಭಗವಾಧ್ವಜ ಹಾರಿಸಲು ನಮಗೆ ಅವಕಾಶ ಕೊಡಬೇಕು’ ಎಂದು ಆಗ್ರಹಿಸಿದರು.
ಅಧ್ಯಕ್ಷ ದೀಪಕ ದಳವಿ ಮಾತನಾಡಿ, ‘ನಗರದಲ್ಲಿ ಮೂರು ಭಾಷೆಗಳಲ್ಲಿ (ಕನ್ನಡ, ಇಂಗ್ಲಿಷ್ ಮತ್ತು ಮರಾಠಿ) ನಾಮಫಲಕಗಳು ಇರುವಂತೆ ನೋಡಿಕೊಳ್ಳಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಾಲಿಕೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.
ಮುಖಂಡರಾದ ದೇವಪ್ಪ ಗುರವ, ಜಯರಾಂ ಮಿರಜಕರ, ರಾಜು ಮರವೆ, ವಿಕಾಸ ಕಲಘಟಗಿ ಇದ್ದರು.