ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೀಕ್ಷೆ 3 ದಿನದಲ್ಲಿ ಪೂರ್ಣಗೊಳಿಸಿ: ಸಂತ್ರಸ್ತರ ಅಹವಾಲು ಆಲಿಸಿದ ಬಾಲಚಂದ್ರ ಸೂಚನೆ

Last Updated 22 ಸೆಪ್ಟೆಂಬರ್ 2021, 16:32 IST
ಅಕ್ಷರ ಗಾತ್ರ

ಗೋಕಾಕ: ಜುಲೈನಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡ ನದಿ ತೀರದ ಗ್ರಾಮಗಳ ಸಂತ್ರಸ್ತರು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿಯಾಗಿ, ಶೀಘ್ರದಲ್ಲಿ ಪರಿಹಾರ ಕೊಡಿಸುವಂತೆ ಒತ್ತಾಯಿಸಿ ಬುಧವಾರ ಮನವಿ ಸಲ್ಲಿಸಿದರು.

ಹೊರವಲಯದ ಬಸವೇಶ್ವರ ಸಭಾಭವನದ ಆವರಣದಲ್ಲಿ ಅರಭಾವಿ ಕ್ಷೇತ್ರದ 21 ಗ್ರಾಮಗಳ ಸಂತ್ರಸ್ತರು ಅಳಲು ತೋಡಿಕೊಂಡರು.

ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ, ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿ.ವೈ., ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಮಸಗುಪ್ಪಿ, ಹುಣಶ್ಯಾಳ ಪಿ.ಜಿ., ಬೀರನಗಡ್ಡಿ, ಬಳೋಬಾಳ, ನಲ್ಲಾನಟ್ಟಿ, ಬಸಳಿಗುಂದಿ, ಲೋಳಸೂರ ಗ್ರಾಮದವರು ಸೂರು ಕಲ್ಪಿಸಿಕೊಡುವಂತೆ ಕೋರಿದರು.

‘ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುವುದು’ ಎಂದು ಭರವಸೆ ನೀಡಿದ ಬಾಲಚಂದ್ರ, ‘ನದಿ ತೀರದ ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ಮೂರು ದಿನಗಳೊಳಗೆ ಸಮೀಕ್ಷೆ ಮುಗಿಸಬೇಕು. ಇದಕ್ಕೆ ನಮ್ಮ ಎನ್ಎಸ್ಎಫ್ ತಂಡವೂ ಸಾಥ್ ನೀಡಲಿದೆ. ಸಮೀಕ್ಷೆಗೆ ಬರುವ ಅಧಿಕಾರಿಗಳೊಂದಿಗೆ ಸಂತ್ರಸ್ತರು ಸೌಜನ್ಯದಿಂದ ವರ್ತಿಸಬೇಕು. ಅವರೊಂದಿಗೆ ವಾಗ್ವಾದ ನಡೆಸಬಾರದು. ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ಅಧಿಕಾರಿಗಳದಾಗಿದೆ’ ಎಂದರು.

‘ಬಡವರಿಗೆ ಸೂರು ಕಲ್ಪಿಸಲು ಅಗತ್ಯವಿರುವ ಸಹಕಾರ ನೀಡಬೇಕು. ಪ್ರವಾಹ ಮತ್ತು ಮಳೆಯಿಂದಾಗಿ ಯಾರು ಮನೆಗಳನ್ನು ಕಳೆದುಕೊಂಡಿದ್ದಾರೋ ಅಂಥವರನ್ನು ಗುರುತಿಸಬೇಕು. ಸಂತ್ರಸ್ತರಿಂದ ಹಣ ಪಡೆಯುವ ಆರೋಪಗಳು ಕೂಡ ಕೇಳಿಬರುತ್ತಿವೆ. ಒಂದು ವೇಳೆ ಅಧಿಕಾರಿಗಳು ಬಡ ಕುಟುಂಬಗಳಿಂದ ಹಣ ಪಡೆದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು. ‘ಮನೆಗಳ ಮಂಜೂರಾತಿಗಾಗಿ ಸಂತ್ರಸ್ತರು ಯಾರಿಗೂ ದುಡ್ಡು ನೀಡಬಾರದು’ ಎಂದು ತಿಳಿಸಿದರು.

‘ಮನೆಗಳನ್ನು ಕಳೆದುಕೊಂಡವರಿಗೆ ಸರ್ಕಾರ ₹ 5 ಲಕ್ಷ ನೀಡುತ್ತಿದೆ. ಇದರಿಂದ ಬಡ ಕುಟುಂಬಗಳಿಗೆ ನೆರವು ಕಲ್ಪಿಸಿದಂತಾಗುತ್ತದೆ. ಇದರಲ್ಲಿ ರಾಜಕೀಯ ಬೆರೆಸಬೇಡಿ. ಕ್ಷೇತ್ರದಲ್ಲಿ 1,500 ಮನೆಗಳು ಪ್ರವಾಹದಿಂದಾಗಿ ಹಾನಿಗೀಡಾಗಿವೆ. ಫಲಾನುಭವಿಗಳನ್ನು ಗುರುತಿಸಿ ಮನೆಗಳ ಉತಾರ ಉಚಿತವಾಗಿ ಪೂರೈಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘2019ರಿಂದ ಇಲ್ಲಿಯವರೆಗೆ ಸಂತ್ರಸ್ತರಿಗೆ ಕಾರಣಾಂತರಗಳಿಂದ ಸಮರ್ಪಕ ಪರಿಹಾರ ದೊರೆತಿಲ್ಲ. ಅದನ್ನೂ ಕೂಡಲೇ ಸರಿಪಡಿಸಬೇಕು. ಈ ಬಾರಿ ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸಿದವರಿಗೆ ₹ 10ಸಾವಿರ ತುರ್ತು ಪರಿಹಾರದ ಚೆಕ್‌ಗಳನ್ನೂ ಕೂಡಲೇ ವಿತರಿಸಬೇಕು. ಹಾನಿಯಾದ ಬೆಳೆಗಳ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕು’ ಎಂದು ನಿರ್ದೇಶನ ನೀಡಿದರು.

ಶಾಸಕರು, ಹುಲ್ಲುಹಾಸಿನ ಮೇಲೆಯೇ ಕುಳಿತು ಅಹವಾಲು ಆಲಿಸಿದ್ದು ಗಮನಸೆಳೆಯಿತು.

ಬೈಲಹೊಂಗಲ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ಗೋಕಾಕ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ್ ಡಿ.ಜೆ. ಮಹಾತ, ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ, ಘಟಪ್ರಭಾ ಪಿಎಸ್ಐ ಶ್ರೀಶೈಲ ಬ್ಯಾಕೂಡ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT