ಬೆಳಗಾವಿ: ‘ಚಿಕ್ಕೋಡಿಯಲ್ಲಿ ಕೊರೊನಾ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಬೇಕು’ ಎಂದು ಆಗ್ರಹಿಸಿ ಚಿಕ್ಕೋಡಿ- ಸದಲಗಾ ಶಾಸಕ ಗಣೇಶ ಹುಕ್ಕೇರಿ ಗುರುವಾರ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.
‘ಚಿಕ್ಕೋಡಿಯು ಬೆಳಗಾವಿಯಿಂದ ಸಾಕಷ್ಟು ದೂರದಲ್ಲಿದೆ. ಅಥಣಿ ತಾಲ್ಲೂಕಿನಿಂದ ಬೆಳಗಾವಿಗೆ ಪರೀಕ್ಷೆಗಾಗಿ ಬರುವುದು ಕಷ್ಟವಾಗುತ್ತದೆ. ಚಿಕ್ಕೋಡಿ ತಾಲ್ಲೂಕು ಮಹಾರಾಷ್ಟ್ರ ಗಡಿಯಲ್ಲಿರುವುದರಿಂದ ಹೆಚ್ಚಿನ ಅಪಾಯದಲ್ಲಿದೆ. ಹೀಗಾಗಿ, ಪ್ರಯೋಗಾಲಯ ಅಗತ್ಯವಾಗಿದೆ’ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
‘ನನ್ನ ಮನವಿ ಪರಿಗಣಿಸಿ ಮೌಖಿಕ ಒಪ್ಪಿಗೆ ಸೂಚಿಸಿದ್ದಿರಿ. ಆದರೆ, ಕ್ರಮವಾಗಿಲ್ಲ. ಪರಿಸ್ಥಿತಿ ಕೈಮೀರುವ ಮುನ್ನ ತೀರ್ಮಾನ ಮಾಡಬೇಕು’ ಎಂದು ಒತ್ತಾಯಿಸಿದರು.
‘ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ’ ಎಂದು ಗಣೇಶ ಮಾಹಿತಿ ನೀಡಿದ್ದಾರೆ.