ಬೆಳಗಾವಿ: ನಗರವೂ ಸೇರಿ ಜಿಲ್ಲೆಯಾದ್ಯಂತ ಮುಸ್ಲಿಮರು 'ಈದ್-ಉಲ್-ಫಿತ್ರ್' ಅನ್ನು ಸಂಭ್ರಮದಿಂದ ಆಚರಿಸಿದರು. ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳು ನಿರ್ಬಂಧಗಳಿಂದಾಗಿ ಕಳೆಗುಂದಿದ್ದ ಹಬ್ಬಕ್ಕೆ ಈ ಬಾರಿ ಸೋಂಕಿನ ಆತಂಕ ನಿವಾರಣೆಯಾದ್ದರಿಂದ ಹೆಚ್ಚಿನ ಕಳೆ ಬಂದಿತು.
ನಗರದ ನ್ಯಾಯಾಲಯ ಬಳಿ ಇರುವ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮಗುರುಗಳು ಹಬ್ಬದ ವೈಶಿಷ್ಟ್ಯದ ಕುರಿತು ವಿವರಿಸುವ ಜೊತೆಗೆ, ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಬೇಕು ಎಂದು ಸಂದೇಶ ಸಾರಿದರು.
ಸಂಗೊಳ್ಳಿ ರಾಯಣ್ಣ ವೃತ್ತ, ಬಿ.ಆರ್. ಅಂಬೇಡ್ಕರ್ ರಸ್ತೆ, ಕಾಕತಿವೇಸ್ ಮಾರ್ಗವಾಗಿ ಅಲ್ಲಾಹ್ ದೇವರನ್ನು ಸ್ಮರಿಸುತ್ತ ಮುಸ್ಲಿಮರು ಮೆರವಣಿಗೆ ಮೂಲಕ ಈದ್ಗಾ ಮೈದಾನದತ್ತ ಹೆಜ್ಜೆ ಹಾಕಿದರು. ಪ್ರಾರ್ಥನೆ ಬಳಿಕ ಪರಸ್ಪರರು 'ಈದ್-ಮುಬಾರಕ್' ಎನ್ನುತ್ತಾ ಶುಭಾಶಯ ವಿನಿಮಯ ಮಾಡಿಕೊಂಡರು.
ನಗರದ ಎಲ್ಲ ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 9.30ಕ್ಕೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. 'ಕೊರೊನಾ ಹಾವಳಿ ಸಂಪೂರ್ಣವಾಗಿ ತಗ್ಗಿ, ಸರ್ವರ ಬಾಳು ಸಮೃದ್ಧವಾಗಲಿ' ಎಂದು ಪ್ರಾರ್ಥನೆ ಮಾಡಿದರು.
ರಂಜಾನ್ ಮಾಸದ ಅಂಗವಾಗಿ ಒಂದು ತಿಂಗಳು ಉಪವಾಸ ವ್ರತ(ರೋಜಾ) ಕೈಗೊಂಡ ಮುಸ್ಲಿಮರು, ಹಬ್ಬದ ದಿನದಂದು ಬಡವರಿಗೆ ದಾನ(ಜಕಾತ್) ಮಾಡಿ ಸಂಭ್ರಮಿಸಿದರು.