ಬೆಳಗಾವಿ: ‘ದೇಶ ಕಂಡ ಅದ್ವಿತೀಯ ಕ್ರೀಡಾಪಟು ಮೇಜರ್ ಧ್ಯಾನ್ಚಂದ್ ಅವರು ಯುವಪೀಳಿಗೆಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ’ ಎಂದು ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಸೀಮಿತ ವಾತಾವರಣದಲ್ಲೂ ತಮ್ಮ ಸಾಮರ್ಥ್ಯವನ್ನು ಸಮಪರ್ಕವಾಗಿ ಬಳಸಿಕೊಂಡು ದೇಶಕ್ಕಾಗಿ ಹಾಕಿ ಕ್ರೀಡೆಯನ್ನು ಬೆಳಸಿದರು. ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಹೆಗ್ಗಳಿಕೆ ಅವರದು’ ಎಂದು ಸ್ಮರಿಸಿದರು.
ಧ್ಯಾನ್ಚಂದ್ ಅವರ ಭಾವಚಿತ್ರಕ್ಕೆ ಗೌರವ ಸಮರ್ಪಿಸಲಾಯಿತು. ಏಕಲವ್ಯ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಅಣ್ವೇಕರ ಅವರನ್ನು ಸತ್ಕರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಸಿದ್ದು ಪಿ. ಆಲಗೂರ, ‘ವಿಶ್ವವಿದ್ಯಾಲಯವು ಕ್ರೀಡಾಪಟುಗಳಿಗೆ ಪೂರಕ ವಾತಾವರಣ ಕಲ್ಪಿಸುತ್ತಿದೆ. ಕ್ರೀಡಾಪಟುಗಳ ಸಾಧನೆ ಗುರುತಿಸುತ್ತಿದೆ’ ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ.ರಂಗರಾಜ ವನದುರ್ಗ, ಹಣಕಾಸು ಅಧಿಕಾರಿ ಪರಶುರಾಮ ದುಡಗುಂಟಿ ಇದ್ದರು.
ಎನ್ಎಸ್ಎಸ್ ಯೋಜನಾಧಿಕಾರಿ ಎಸ್.ಒ. ಹಲಸಗಿ ಸ್ವಾಗತಿಸಿದರು. ಕ್ರೀಡಾ ನಿರ್ದೇಶಕ ಜಗದೀಶ ಎಸ್. ಗಸ್ತಿ ವಂದಿಸಿದರು.