ಬೆಳಗಾವಿ: ರೈತರ ಸಾಲ ಮನ್ನಾ ಮಾಡಲು ಅಂತಿಮ ಗಡುವು (ಡೆಡ್ಲೈನ್) ನಿಗದಿ ಮಾಡುವಂತೆ ಕೇಳುತ್ತಿರುವ ಬಿಜೆಪಿಯವರು ಏನು ಮಾಡಿದ್ದಾರೆ? ಬಡವರ ಬ್ಯಾಂಕ್ ಖಾತೆಗೆ ₹ 15 ಲಕ್ಷ ಹಾಕುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ಡೆಡ್ಲೈನ್ ನೀಡಿದ್ದಾರೆ? ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಕಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೆಹಲಿಯಲ್ಲಿ ಲಕ್ಷಾಂತರ ಜನ ರೈತರು ಪ್ರತಿಭಟನೆ ನಡೆಸಿದರೆ ಅವರನ್ನು ಕರೆದು ಮಾತನಾಡುವಷ್ಟು ಸೌಜನ್ಯ ಮೋದಿ ಅವರಿಗೆ ಇಲ್ಲ. ಇವರಿಗೆ ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದೆಯೇ? ಜನರು ಗಮನಿಸುತ್ತಿದ್ದಾರೆ’ ಎಂದು ಹೇಳಿದರು.
‘ರೈತರ ಸಾಲ ಮನ್ನಾ ಯೋಜನೆ ಈಗ ರಾಜ್ಯದ ಬಿಜೆಪಿ ಮುಖಂಡರಿಗೆ ಅರ್ಥವಾಗಿದೆ. ಅದರ ಆತಂಕದಲ್ಲಿ ಅವರು ಸದನ ನಡೆಸಲು ಬಿಡುತ್ತಿಲ್ಲ. ಯಾವುದೇ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಸದನದಲ್ಲಿ ಮಾಹಿತಿ ನೀಡದಂತೆ ನನ್ನನ್ನು ತಡೆಯಲು ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ನುಡಿದರು.
ಇದರಲ್ಲಿ ರಾಜಕೀಯ ಬೆಳೆಸಲು ಹೊರಟಿದ್ದಾರೆ. ಜನರಿಗೆ ಅರ್ಥವಾಗುತ್ತಿದೆ. ಬಿಜೆಪಿಯವರ ಅಟ್ಟಹಾಸ ಬಹಳ ದಿನ ನಡೆಯುವುದಿಲ್ಲ. ಕಲಾಪ ನಡೆಯದಂತೆ ತಡೆಯೊಡ್ಡುತ್ತಿರುವುದು ಅವರ ಸಣ್ಣತನವನ್ನು ತೋರಿಸುತ್ತದೆ ಎಂದು ಛೇಡಿಸಿದರು.