ರಾಯಬಾಗ: ‘ಇಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾಗಿರುವ ಕೇಂದ್ರ ಗ್ರಂಥಾಲಯವನ್ನು ಸ್ಮಾರಕವನ್ನಾಗಿ ಘೋಷಣೆ ಮಾಡಬೇಕು ಹಾಗೂ ತ್ವರಿತವಾಗಿ ಹೊಸ ಕಟ್ಟಡ ನಿರ್ಮಿಸಬೇಕು’ ಎಂದು ಆಗ್ರಹಿಸಿ ಗ್ರಂಥಾಲಯದ ಬಳಿ ನಾಗರಿಕ ಹಕ್ಕುಗಳ ಹಿತರಕ್ಷಣಾ ಸಮಿತಿಯವರು ಬುಧವಾರ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಸಿದರು.
‘1931ರಲ್ಲಿ ಛತ್ರಪತಿ ಶಾಹೂಮಹಾರಾಜ ಅವರ ಕರವೀರ ಸಂಸ್ಥಾನದಿಂದ ಸ್ಥಾಪಿತವಾದ ಗಡಿನಾಡಿನ ಐತಿಹಾಸಿಕ ಗ್ರಂಥಾಲಯ ಇದಾಗಿದೆ. ಮೈಸೂರಿನಲ್ಲಿ 1915ರಲ್ಲಿ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ನಂತರದ ಗಡಿಯಲ್ಲಿನ ಗ್ರಂಥಾಲಯವಿದು ಎನ್ನುವ ಹೆಗ್ಗಳಿಕೆ ಗಳಿಸಿದೆ. ಅಪಾರ ಹಾಗೂಅಪರೂಪದ ಗ್ರಂಥ ಭಂಡಾರವಿದೆ. ಆದರೆ, ನಗರ ಬೆಳೆದಂತೆಲ್ಲಾ ಇದನ್ನು ನಿರ್ಲಕ್ಷ್ಯ ಮಾಡಲಾಗಿದೆ. ಹಳೆಯ ಕಟ್ಟಡ ಬಿರುಕು ಬಿಟ್ಟು ಶಿಥಿಲಗೊಂಡಿದೆ. ಮಳೆ ನೀರು ಸೋರುತ್ತಿರುವುದರಿಂದ ಪುಸ್ತಕಗಳಿಗೆ ಹಾನಿಯಾಗುತ್ತಿದೆ. ವಿಸ್ತರಣೆಗೆ ಹಾಗೂ ಪುಸ್ತಕಗಳ ಸಮರ್ಪಕ ನಿರ್ವಹಣೆಗೆ ಅವಕಾಶ ಇಲ್ಲದಂತಾಗಿದೆ. ಸಕಾಲಕ್ಕೆ ನೂತನ ಸ್ಮಾರಕ ಕಟ್ಟಡ ನಿರ್ಮಾಣಗೊಳ್ಳದಿದ್ದರೆ ಬೆಲೆ ಬಾಳುವ ಐತಿಹಾಸಿಕ ಸಾಹಿತ್ಯ ಭಂಡಾರ ನಾಶವಾಗುವ ಸಂಭವ ಹೆಚ್ಚಾಗಿದೆ’ ಎಂದು ಕವಳವಳ ವ್ಯಕ್ತಪಡಿಸಿದರು.
‘ಇರುವ ಸ್ಥಳದಲ್ಲೇ ಎರಡು ಅಂತಸ್ತಿನ ಕಟ್ಟಡ ನಿರ್ಮಿಸುವ ಮೂಲಕ ಗ್ರಂಥಾಲಯವನ್ನು ಉಳಿಸಿ–ಬೆಳೆಸಬೇಕು. ಈ ಭಾಗದವರ ಜ್ಞಾನಾರ್ಜನೆಗೆ ಅನುಕೂಲ ಕಲ್ಪಿಸಬೇಕು. ವಿಶೇಷವಾಗಿ ಯುವಜಜನರು, ವಿದ್ಯಾರ್ಥಿಗಳಿಗೆ ನೆರವಾಗಬೇಕು’ ಎಂದು ಆಗ್ರಹಿಸಿ ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ಸಮಿತಿಯ ಮಹಾವೀರ ಸಾಣೆ, ವೀರಣ್ಣ ಮಡಿವಾಳರ, ಸಾಗರ ಜಡೆನ್ನವರ, ಲಕ್ಷ್ಮಣ ಕೋಳಿ, ಮುತ್ತಪ್ಪ ಭಜಂತ್ರಿ, ಅಬ್ಬಾಸ್ ಲತೀಫನವರ, ಕಾಡೇಶ ಐಹೊಳೆ, ಕಲ್ಯಾಣರಾವ್ ದೇಶಪಾಂಡೆ, ಬಸವರಾಜ ಕಾಂಬಳೆ, ಗಜಾನನ ಕೊಕಾಟೆ, ಅನಿಲ ಮೋಹಿತೆ ಪಾಲ್ಗೊಂಡಿದ್ದರು.