ಬೆಳಗಾವಿ: ‘ಗ್ರಾಮೀಣ ಕ್ಷೇತ್ರದ ಜನರಲ್ಲಿ ಅಭಿವೃದ್ಧಿಗೆ ಪೂರಕವಾದ ಮನೋಭಾವವಿದೆ. ಒಳ್ಳೆಯ ಕೆಲಸಕ್ಕೆ ಸದಾ ಪ್ರೋತ್ಸಾಹ, ಬೆಂಬಲ ನೀಡುತ್ತಾರೆ. ಹೀಗಾಗಿ ಇಲ್ಲಿ ಕೆಲಸ ಮಾಡಲು ಖುಷಿಯಾಗುತ್ತದೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಕ್ಷೇತ್ರದ ಬೆಂಡಿಗೇರಿ ಗ್ರಾಮದಲ್ಲಿ ಲಕ್ಷ್ಮೀದೇವಿ ಮಂದಿರದ ಜೀರ್ಣೋದ್ಧಾರಕ್ಕಾಗಿ ಗುರುವಾರ ಚೆಕ್ ಹಸ್ತಾಂತರಿಸಿ ಅವರು ಮಾತನಾಡಿದರು.
‘ಇಲ್ಲಿನವರು ಸುಸಂಸ್ಕೃತರು, ಸುಶಿಕ್ಷಿತರು, ಸಹಕಾರ ಮನೋಭಾವದವರಿದ್ದರೂ ಹಿಂದೆ ಕ್ಷೇತ್ರದ ಅಭಿವೃದ್ಧಿ ಆಗದಿರುವುದು ಆಶ್ಚರ್ಯ ಉಂಟು ಮಾಡುತ್ತದೆ. ಇದಕ್ಕೆ ಹಿಂದಿನ ಜನಪ್ರತಿನಿಧಿಗಳ ನಿರಾಸಕ್ತಿಯಲ್ಲದೆ ಬೇರೇನೂ ಕಾರಣವಿರಲು ಸಾಧ್ಯವಿಲ್ಲ. ಸ್ವಾರ್ಥಕ್ಕೊಸ್ಕರ ಅಭಿವೃದ್ಧಿ ಕಡೆಗಣಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಸರ್ಕಾರದ ಸೌಲಭ್ಯಗಳನ್ನು ಅನುಭವಿಸುವ ಹಕ್ಕು ಜನರಿಗಿದೆ. ಜನಪ್ರತಿನಿಧಿಯಾದವರು ಅದನ್ನು ಕೊಡಿಸಬೇಕು. ಇಲ್ಲವಾದಲ್ಲಿ ಅದಕ್ಕಿಂತ ವಂಚನೆ ಮತ್ತೊಂದಿಲ್ಲ’ ಎಂದು ಟೀಕಿಸಿದರು.
ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ, ‘ಜಿಲ್ಲೆಯ ಜನರು, ಅದರಲ್ಲೂ ಗ್ರಾಮೀಣ ಕ್ಷೇತ್ರದವರು ನಮ್ಮ ಕುಟುಂಬದ ಎಲ್ಲರನ್ನೂ ಮನೆಯ ಸದಸ್ಯರಂತೆ ಕಾಣುತ್ತಿದ್ದಾರೆ. ಇದು ನಮ್ಮ ಪುಣ್ಯವೆ ಸರಿ. ಈ ಋಣ ತೀರಿಸುವ ಕೆಲಸ ಮಾಡುತ್ತೇವೆ’ ಎಂದರು.
ದೇವಸ್ಥಾನದ ಜೀರ್ಣೋದ್ಧಾರಕ್ಕೆ ₹ 12 ಲಕ್ಷದ ಪೈಕಿ ಮೊದಲ ಕಂತಿನಲ್ಲಿ ಶಾಸಕರ ನಿಧಿಯಿಂದ ₹ 5 ಲಕ್ಷ ಚೆಕ್ ಅನ್ನು ಸಮಿತಿಯವರಿಗೆ ಲಕ್ಷ್ಮಿ ಹಸ್ತಾಂತರಿಸಿದರು.