ಬೆಳಗಾವಿ: ‘ಚಿಕ್ಕವನಿದ್ದಾಗ ತಂದೆ, 6ನೇ ತರಗತಿಯಲ್ಲಿದ್ದಾಗ ತಾಯಿ ಮೃತಪಟ್ಟರು. ವಾಸಕ್ಕೆ ಸ್ವಂತ ಮನೆ, ಬೇರ್ಯಾವ ಆಸ್ತಿಯೂ ಇರಲಿಲ್ಲ. ಆದರೆ, ಓದಬೇಕೆಂಬ ಉತ್ಕಟವಾದ ಹಂಬಲವಿತ್ತು. ಹಾಗಾಗಿ ಹಾಸ್ಟೆಲ್ ಸೇರಿ ಓದು ಮುಂದುವರಿಸಿದ್ದೆ. ಇಲ್ಲಿ ಕಷ್ಟಪಟ್ಟು ಓದಿದ್ದಕ್ಕೆ ಈಗ ಫಲ ಸಿಕ್ಕಿದೆ. ಈ ಸಾಧನೆ ನನ್ನ ನೋವನ್ನೆಲ್ಲ ಮರೆಯಿಸಿದೆ’
ಇಲ್ಲಿನ ಸರ್ಕಾರಿ ಪುರುಷರ ಅನುಪಾಲನಾ ಗೃಹದಲ್ಲಿ ವಾಸವಿರುವ, ಈ ಬಾರಿ ಪಿಯು ದ್ವಿತೀಯ ವರ್ಷದ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ.86.66 ಅಂಕ ಗಳಿಸಿದ ಬಳ್ಳಾರಿ ಮೂಲದ ಶಂಕರ ‘ಪ್ರಜಾವಾಣಿ’ ಮುಂದೆ ಸಂತಸ ಹಂಚಿಕೊಂಡಿದ್ದು ಹೀಗೆ.
‘ಬಳ್ಳಾರಿ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಇದ್ದುಕೊಂಡು ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದೆ. ಆಗ ಶೇ.91ರಷ್ಟು ಅಂಕ ಗಳಿಸಿದ್ದೆ. ಈಗ ನಾನು ಬೆಳಗಾವಿಯ ಸರ್ಕಾರಿ ಸರ್ದಾರ್ಸ್ ಪಿಯು ಕಾಲೇಜಿನ ವಿದ್ಯಾರ್ಥಿ. ಅಕ್ಕ ಶ್ರೀದೇವಿ ಮೈಸೂರಿನ ಹಾಸ್ಟೆಲ್ನಲ್ಲಿದ್ದು, ಪದವಿ ಓದುತ್ತಿದ್ದಾರೆ. ಪ್ರೌಢಶಿಕ್ಷಣ ಪಡೆಯುತ್ತಿರುವ ತಮ್ಮ ರವಿ ಬೆಳಗಾವಿ ಬಾಲಕರ ಬಾಲಮಂದಿರದಲ್ಲಿದ್ದಾನೆ. ಹಾಸ್ಟೆಲ್ನಲ್ಲೇ ಮೂವರ ಬದುಕು’ ಎಂದು ಅವರು ಹೇಳಿದರು.
ಶಂಕರ ಕನ್ನಡ ವಿಷಯದಲ್ಲಿ 88, ಇಂಗ್ಲಿಷ್ನಲ್ಲಿ 61, ಇತಿಹಾಸದಲ್ಲಿ 95, ಅರ್ಥಶಾಸ್ತ್ರದಲ್ಲಿ 94, ರಾಜ್ಯಶಾಸ್ತ್ರದಲ್ಲಿ 93 ಮತ್ತು ಭುಗೋಳಶಾಸ್ತ್ರದಲ್ಲಿ 89, ಅಂಕ ಗಳಿಸಿದ್ದಾರೆ. ಬಿ.ಎ ಕೋರ್ಸ್ಗೆ ಪ್ರವೇಶ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಸಿದ್ಧತೆಯಲ್ಲಿರುವ ಅವರಿಗೆ ಭವಿಷ್ಯದಲ್ಲಿ ಪೊಲೀಸ್ ಅಧಿಕಾರಿಯಾಗುವ ಆಸೆ.
ತಿಂಗಳಿಗೊಮ್ಮೆ ಸಭೆ ನಡೆಸಿ ಮಕ್ಕಳ ಶೈಕ್ಷಣಿಕ ಗೊಂದಲ ಬಗೆಹರಿಸುತ್ತಿದ್ದೆವು. ನಿತ್ಯ ಸಂಜೆ ಟ್ಯೂಷನ್ ವ್ಯವಸ್ಥೆ ಮಾಡಿದ್ದೆವು. ಇಬ್ಬರು ಮಕ್ಕಳ ಸಾಧನೆ ಖುಷಿತಂದಿದೆ–ಮಹಾಂತೇಶ ಭಜಂತ್ರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.