ಚನ್ನಮ್ಮನ ಕಿತ್ತೂರು: ‘ಅಲ್ಪ ಪ್ರಮಾಣದಲ್ಲಿ ಮಳೆಯಾದರೂ ಇಲ್ಲಿಯ ಸೋಮವಾರ ಪೇಟೆಯ ಕೊನೆಯಂಚಿನ ಮುಖ್ಯರಸ್ತೆ, ಬಸವೇಶ್ವರ ಕಾಲೊನಿಹಾಗೂ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತ ಆಗುತ್ತವೆ. ಈ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆ ಕಚೇರಿಗೆ ಭೇಟಿ ನೀಡಿದ ಅವರು, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಎದುರು ಅಳಲು ತೋಡಿಕೊಂಡರು.
‘ಮಳೆಯಾದರೆ ಮೇಲಿಂದ ನೀರು ನುಗ್ಗಿ ಬರುತ್ತದೆ. ಹರಿದು ಹೋಗಲು ಆಸ್ಪದ ಇಲ್ಲದ್ದರಿಂದ ರಸ್ತೆ ಹಳ್ಳದಂತಾಗುತ್ತದೆ.ಇದರಿಂದ ಮನೆಯೊಳಗೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸುತ್ತದೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಕಿತ್ತೂರು-ತಡಕೋಡ ರಸ್ತೆ ಸ್ಥಗಿತಗೊಳಿಸಿ ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಎಇಇ ಸಂಜೀವ ಮಿರಜಕರ ಮಾತನಾಡಿ, ‘ರಸ್ತೆಯಿಂದ ಮುಂದೆ ನೀರು ಹರಿಯಲು ಅವಕಾಶ ಇಲ್ಲ. ಅಕ್ಕಪಕ್ಕ ಖಾಸಗಿ ವ್ಯಕ್ತಿಗಳ ಜಮೀನುಗಳಿವೆ. ಅವರು ಭೂಮಿ ನೀಡಿದರೆ ಮಳೆಯ ನೀರನ್ನು ಮುಂದೆ ಹರಿದು ಹೋಗುವಂತೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದರು.