ಬೆಳಗಾವಿ: ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಿತ್ರನಟ, ಪದ್ಮಭೂಷಣ ರಾಜಕುಮಾರ್ ಅವರ 91ನೇ ಜನ್ಮದಿನವನ್ನು ಬುಧವಾರ ಸರಳವಾಗಿ ಆಚರಿಸಲಾಯಿತು.
ವಾರ್ತಾ ಇಲಾಖೆ ಪ್ರಭಾರ ಉಪನಿರ್ದೇಶಕ ಗುರುನಾಥ ಕಡಬೂರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಮಾತನಾಡಿ, ‘ನಾಡಿನ ಸಾಂಸ್ಕೃತಿಕ ರಾಯಭಾರಿ ಎಂದು ಕರೆಯಲ್ಪಡುವ ರಾಜಕುಮಾರ್ ಅವರ ಸರಳ ನಡೆ-ನುಡಿ ಎಲ್ಲರಿಗೂ ಮಾದರಿಯಾಗಿದೆ. ತಮ್ಮ ನಟನೆಯ ಮೂಲಕ ಮನೆ ಮಾತಾಗಿರುವ ಅವರ ವೃತ್ತಿಬದುಕು ಆದರ್ಶವಾದುದು. ಚಲನಚಿತ್ರರಂಗದಲ್ಲಿ ಸಲ್ಲಿಸಿದ ಸೇವೆಯೂ ಅಪಾರವಾದುದು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡಿದ ಕೀರ್ತಿ ಅವರದು’ ಎಂದರು.
ಸಾಹಿತಿ, ರಂಗಸಂಪದ ತಂಡದ ಶಿರೀಷ್ ಜೋಶಿ ಮಾತನಾಡಿ, ‘ಅವರು ಅತ್ಯುತ್ತಮ ಪ್ರತಿಭೆ ಹೊಂದಿದ್ದ ಅಪರೂಪದ ಕಲಾವಿದರು. ಅಭಿನಯವನ್ನೇ ದೇವರು ಎಂದು ಆರಾಧಿಸುತ್ತಿದ್ದರು’ ಎಂದು ಸ್ಮರಿಸಿದರು.
‘ಕನ್ನಡದ ಮೇರುನಟರಾಗಿದ್ದ ಅವರಿಗೆ ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ ಹೀಗೆ ಹಲವಾರು ಅತ್ಯುನ್ನತ ಗೌರವ–ಪ್ರಶಸ್ತಿಗಳು ಲಭಿಸಿರುವುದು ಅವರ ವೃತ್ತಿಬದುಕಿನ ಸಾಧನೆಗೆ ಕೈಗನ್ನಡಿಯಾಗಿವೆ’ ಎಂದರು.
ವಾರ್ತಾ ಇಲಾಖೆಯ ಎಂ.ಎಲ್. ಜಮಾದಾರ, ಸೈನಿಕ ಪುನರ್ವಸತಿ ಮತ್ತು ಕಲ್ಯಾಣ ಇಲಾಖೆ ಕೆ.ಆರ್.ಕುಲಕರ್ಣಿ, ಶಿಕ್ಷಣ ಇಲಾಖೆಯ ಝಡ್.ಜಿ. ಸೈಯದ್, ಜಿ.ವೈ. ಕವಳೆ, ಕೆ.ಎಸ್. ಕಾಗಲೆ ಭಾಗವಹಿಸಿದ್ದರು.