ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ‘ಇಲ್ಲ’ಗಳ ತವರು ಉಡಚಮ್ಮ ಊರು

ರಾಮದುರ್ಗ ತಾಲ್ಲೂಕಿನ ಕಡೇ ಹಳ್ಳಿ ಮೂಲಸೌಲಭ್ಯ ವಂಚಿತ: ಹೆಜ್ಜೆ–ಹೆಜ್ಜೆಗೂ ಸಂಕಷ್ಟ
Published 6 ಮಾರ್ಚ್ 2024, 4:29 IST
Last Updated 6 ಮಾರ್ಚ್ 2024, 4:29 IST
ಅಕ್ಷರ ಗಾತ್ರ

ರಾಮದುರ್ಗ: ಯಾವುದೇ ಗ್ರಾಮದಲ್ಲಿ ಒಂದೆರಡು ಸಮಸ್ಯೆಗಳಿರುವುದು ಸಹಜ. ಆದರೆ, ತಾಲ್ಲೂಕಿನ ಸಂಗಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಉಡಚಮ್ಮ ನಗರದಲ್ಲಿ ಸಮಸ್ಯೆಗಳದ್ದೇ ಸರಮಾಲೆ.

ಸುಮಾರು 1,100 ಜನಸಂಖ್ಯೆಯ ಗ್ರಾಮದಲ್ಲಿ ಸಂಚಾರಕ್ಕಾಗಿ ಉತ್ತಮ ರಸ್ತೆಯೇ ಇಲ್ಲ. ಬಾಯಾರಿಕೆ ನೀಗಿಸಲು ಕುಡಿಯುವ ನೀರಿಲ್ಲ. ಚರಂಡಿ ವ್ಯವಸ್ಥೆ ಇಲ್ಲ. ಅಂಗನವಾಡಿ ಕೇಂದ್ರ ಮತ್ತು ಸಾಮೂಹಿಕ ಶೌಚಗೃಹವಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಹೀಗೆ... ‘ಇಲ್ಲ’ಗಳ ಪಟ್ಟಿ ಮುಂದುವರಿಯುತ್ತದೆ.

‘ರಾಮದುರ್ಗ ತಾಲ್ಲೂಕಿನ ಕಡೇ ಹಳ್ಳಿ ಅಭಿವೃದ್ಧಿ ವಿಚಾರದಲ್ಲೂ ಕಡೇ ಸ್ಥಾನದಲ್ಲಿದೆ’ ಎಂಬುದು ಗ್ರಾಮಸ್ಥರ ದೂರು.

ನಮ್ಮಲ್ಲಿ ರಸ್ತೆ ಸಮಸ್ಯೆ ತೀವ್ರವಾಗಿದೆ. ಪಕ್ಕದ ನರಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತ್ವರಿತವಾಗಿ ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ.
ಶರಣಪ್ಪ ಕಳಸದ, ಗ್ರಾಮಸ್ಥ

ಕಲುಷಿತ ನೀರು ಸೇವನೆ: ಉಡಚಮ್ಮ ನಗರದಲ್ಲಿ ಪ್ರಸಕ್ತ ವರ್ಷ ಬೇಸಿಗೆ ಆರಂಭದಲ್ಲೇ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಕುಡಿಯುವ ನೀರಿಗೆ ಆಸರೆಯಾಗಿದ್ದ ಕೆರೆಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆರೆ ನೀರು ಕಲುಷಿತಗೊಂಡಿದ್ದು, ಗ್ರಾಮಸ್ಥರು ಅನಿವಾರ್ಯವಾಗಿ ಅದನ್ನೇ ಸೇವಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರಿನ ಘಟಕ ಗ್ರಾಮಸ್ಥರಿಗೆ ಮರೀಚಿಕೆ. ಮನೆ–ಮನೆಗೆ ನಲ್ಲಿ ಅಳವಡಿಸಿದ್ದರೂ, ಎಂದಿಗೂ ಹನಿ ನೀರು ಬಂದಿಲ್ಲ.

ಈ ಊರಿಗೆ ಸಂಪರ್ಕ ರಸ್ತೆ ಉತ್ತಮವಾಗಿಲ್ಲ. ಚಿಕ್ಕೊಪ್ಪದಿಂದ ಉಡಚಮ್ಮ ನಗರಕ್ಕೆ ಸಂಪರ್ಕಿಸುವ 5.5 ಕಿ.ಮೀ. ರಸ್ತೆಯಲ್ಲಿ 1 ಕಿ.ಮೀ. ವರೆಗೆ ಮಾತ್ರ ಡಾಂಬರೀಕರಣ ಮಾಡಲಾಗಿದೆ. ಉಳಿದ ರಸ್ತೆ ಮಣ್ಣಿನಿಂದ ಕೂಡಿದೆ. ಇದರಲ್ಲೇ ಗ್ರಾಮಸ್ಥರು ನಿತ್ಯ ಸರ್ಕಸ್‌ ಮಾಡುತ್ತ ಸಂಚರಿಸುವುದು ಅನಿವಾರ್ಯ. ಗ್ರಾಮದಲ್ಲಿ ಒಂದೂ ಕಾಂಕ್ರೀಟ್‌ ರಸ್ತೆಯಿಲ್ಲ. ಮಳೆಯಾದರಂತೂ ಕಾಲ್ನಡಿಗೆಯೂ ಕಷ್ಟ.

ಇಲ್ಲಿಗೆ ಅಂಗನವಾಡಿ ಕೇಂದ್ರ ಮಂಜೂರಾಗಿದೆ. ಆದರೆ, ಕಟ್ಟಡ ಇಲ್ಲದ್ದರಿಂದ ದೇವಸ್ಥಾನಗಳಲ್ಲೇ ಮಕ್ಕಳಿಗೆ ಅಕ್ಷರಾಭ್ಯಾಸ ನಡೆಯುತ್ತಿದೆ. ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಗ್ರಾಮಸ್ಥರು ಹೆಣಗಾಡಬೇಕಿದೆ. ಇಲ್ಲಿನವರಿಗೆ ತುರ್ತು ಚಿಕಿತ್ಸೆಗಾಗಿ 16 ಕಿ.ಮೀ. ದೂರದಲ್ಲಿರುವ ಶಿವಪೇಟೆಯ ಸರ್ಕಾರಿ ಆಸ್ಪತ್ರೆಯೇ ಗತಿ!

ಬಸ್‌ ಇಲ್ಲ: ಉಡಚಮ್ಮ ನಗರಕ್ಕೆ ಸರ್ಕಾರಿ ಬಸ್‌ ಸೌಕರ್ಯವಿಲ್ಲ. ಗ್ರಾಮಸ್ಥರು ಯಾವುದಾದರೂ ಊರಿಗೆ ಹೋಗಬೇಕಾದರೆ, 5 ಕಿ.ಮೀ. ನಡೆದುಕೊಂಡೇ ಹೋಗಿ ಬಸ್‌ ಹಿಡಿಯಬೇಕಾದ್ದು ಅನಿವಾರ್ಯ. ಸಂಚಾರಕ್ಕಾಗಿ ಕೆಲವರು ಬೈಕ್‌ ಮತ್ತು ಇತರೆ ವಾಹನಗಳನ್ನು ಬಳಸುತ್ತಾರೆ. ಆದರೆ, ಬಡವರ ಸ್ಥಿತಿ ಹೇಳತೀರದು.

ಉಡಚಮ್ಮ ನಗರದಲ್ಲಿ ನರೇಗಾ ಯೋಜನೆಯಡಿ ರಸ್ತೆ ಅಭಿವೃದ್ಧಿ ಮತ್ತಿತರ ಕಾಮಗಾರಿ ಕೈಗೊಳ್ಳಲಾಗುವುದು. ಜನರಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು.
ಐ.ಎಚ್‌.ಅಗಸರ, ಪಿಡಿಒ, ಸಂಗಳ

‘ಸರ್ಕಾರವೇನೋ ನಮಗೆ ಉಚಿತವಾಗಿ ಬಸ್‌ ಸೌಕರ್ಯ ಕಲ್ಪಿಸಿದೆ. ಆದರೆ, ನಮ್ಮೂರಿಗೆ ಬಸ್‌ಗಳೇ ಬರುವುದಿಲ್ಲ. ನಾವು ಖಾಸಗಿ ವಾಹನಗಳಲ್ಲೇ ಓಡಾಡುವುದು ಅನಿವಾರ್ಯವಾಗಿದೆ. ಒಂದರ್ಥದಲ್ಲಿ ಶಕ್ತಿ ಯೋಜನೆ ಇದ್ದೂ ಇಲ್ಲದಂತಾಗಿದೆ’ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಬಯಲೇ ಶೌಚಾಲಯ ಈ ಗ್ರಾಮದಲ್ಲಿ ಸಾರ್ವಜನಿಕ ಶೌಚಗೃಹಗಳಿಲ್ಲ. ನೀರಿನ ಕೊರತೆ ಕಾರಣಕ್ಕೆ ತಮ್ಮ ಮನೆಗಳಲ್ಲಿ ನಿರ್ಮಿಸಿಕೊಂಡ ವೈಯಕ್ತಿಕ ಶೌಚಗೃಹಗಳನ್ನೂ ಜನರು ಬಳಕೆ ಮಾಡುವುದಿಲ್ಲ. ಹಾಗಾಗಿ ಗ್ರಾಮಸ್ಥರು ಶೌಚಕ್ಕಾಗಿ ಬಯಲಿನತ್ತ ಮುಖಮಾಡುವುದು ಇಲ್ಲಿ ಸಾಮಾನ್ಯ. ಇಡೀ ಊರು ಗಬ್ಬೆದ್ದು ನಾರುತ್ತಿದ್ದು ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ.

ಉಡಚಮ್ಮ ನಗರದ ಕೆರೆ ನೀರು ಕಲುಷಿತಗೊಂಡಿದೆ
ಉಡಚಮ್ಮ ನಗರದ ಕೆರೆ ನೀರು ಕಲುಷಿತಗೊಂಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT