ಅಮಿತ್ ಶಾ ಭೇಟಿಯಾದ ರಮೇಶ ಜಾರಕಿಹೊಳಿ: ಸಿಬಿಐ ಹೆಗಲಿಗೆ ಬೀಳುತ್ತಾ ಸಿಡಿ ಕೇಸ್?

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಬಿಜೆಪಿ ಶಾಸಕ ರಮೇಶ ಜಾರಕಿ ಹೊಳಿ ಅವರು ತಮ್ಮ ವಿರುದ್ಧದ ಸಿ.ಡಿ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿದರು.
ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ‘ನಾನು ಗೃಹ ಸಚಿವರನ್ನು ಭೇಟಿ ಮಾಡಿ ದಾಖಲೆಗಳನ್ನು ನೀಡಿದ್ದೇನೆ. ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಮನವಿ ಮಾಡಿದ್ದೇನೆ’ ಎಂದರು.
ಸಿಬಿಐ ಮೂಲಕ ಪ್ರಕರಣದ ತನಿಖೆ ನಡೆಸಲು ಗೃಹ ಸಚಿವರು ಒಪ್ಪಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.
ತಮ್ಮ ರಾಜಕೀಯ ವರ್ಚಸ್ಸು ಹಾಳು ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಸಿ.ಡಿ. ಮಾಡಿಸಿದ್ದಾರೆ ಎಂಬುದಾಗಿ ಗೃಹ ಸಚಿವರಲ್ಲಿ ಜಾರಕಿಹೊಳಿ ದೂರಿದರು ಎಂದು ಆಪ್ತ ಮೂಲಗಳು ತಿಳಿಸಿವೆ.
‘ನನ್ನ ಹಾಗೂ ಯುವತಿಗೆ ಸಂಬಂಧಿಸಿದ ಸಿ.ಡಿ ಮಾಡಿಸಿದ್ದು ಇದೇ ಮಹಾನಾಯಕ. ರಮೇಶಜಾರಕಿಹೊಳಿಯನ್ನು ಜೈಲಿಗೆ ಕಳಿಸಲು ₹40 ಕೋಟಿ ಖರ್ಚುಮಾಡುತ್ತೇನೆ ಎಂದು ಮಹಾನಾಯಕ ಹೇಳಿದ ಆಡಿಯೊ ನನ್ನ ಬಳಿ ಇದೆ. ನನ್ನ ಪ್ರಕರಣದಲ್ಲಿರುವ ಆ ಹುಡುಗಿ, ಶ್ರವಣ್ ಮತ್ತು ನರೇಶ್, ಕನಕಪುರದ ಗ್ರಾನೈಟ್ ಉದ್ಯಮಿ, ಅವನ ಕಾರ್ ಚಾಲಕ ಪರಶಿವಮೂರ್ತಿ, ಮಂಡ್ಯದ ಇಬ್ಬರು ನಾಯಕರು ಆರೋಪಿಗಳು. ಹಾಗಾಗಿ, ಈ ಪ್ರಕರಣ ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ರಮೇಶ ಜಾರಕಿಹೊಳಿ ಬೆಳಗಾವಿಯಲ್ಲಿ ಸೋಮವಾರ ಹೇಳಿದ್ದರು. ರಮೇಶ್ ಅವರ ಆರೋಪವನ್ನು ಶಿವಕುಮಾರ್ ನಿರಾಕರಿಸಿದ್ದರು.
6 ತಿಂಗಳ ನಂತರ ಬೆಂಗಳೂರಿನಲ್ಲಿ ನೇಪಾಳ ಯುವತಿ ಮೃತದೇಹ ಪೊದೆಯಲ್ಲಿ ಪತ್ತೆ: ಕೊಲೆ?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.