ಮುಗಳಖೋಡ (ಬೆಳಗಾವಿ ಜಿಲ್ಲೆ): ‘ಪಟ್ಟಣದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಯುವುದಕ್ಕಾಗಿ ಸ್ವಯಂಘೋಷಿತ ಬಂದ್ ಆಚರಿಸಲು ತೀರ್ಮಾನಿಸಲಾಗಿದೆ. ಎಲ್ಲರೂ ಇದಕ್ಕೆ ಸಹಕಾರ ಕೊಡಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಬಿ. ಡಂಬಳ ಹೇಳಿದರು.
ಪುರಸಭೆ ಸಭಾಭವನದಲ್ಲಿ ನಡೆದ ಕೋವಿಡ್ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
‘ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಸೆಂಟರ್ ತೆಗೆಯಲು ಬೇಕಾದ ವ್ಯವಸ್ಥೆ ಇದ್ದರೂ ಶಾಸಕ ಹಾಗೂ ಸಂಸದರು ಕಾಳಜಿ ವಹಿಸುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ’ ಎಂದು ಪುರಸಭೆ ಸದಸ್ಯ ಕರೆಪ್ಪ ಮಂಟೂರ ಆರೋಪಿಸಿದರು.
ಶಾಸಕ ಮತ್ತು ಸಂಸದರ ಹೆಸರು ಪ್ರಸ್ತಾಪ ಆಗುತ್ತಿದ್ದಂತೆಯೇ ಗದ್ದಲದ ವಾತಾವರಣ ನಿರ್ಮಾಣವಾಗಿ ಸಭೆ ಮೊಟಕುಗೊಂಡಿತು.