ಬೆಳಗಾವಿ: ‘ಕವಿ ಎಸ್.ಡಿ. ಇಂಚಲರು ನವೋದಯ ಹಾಗೂ ನವ್ಯದ ಕೊಂಡಿಯಾಗಿ ಗಡಿ ಜಿಲ್ಲೆಯಲ್ಲಿ ಕನ್ನಡದ ಕಂಪನ್ನು ಪಸರಿಸಿದ ಕವಿ ಶ್ರೇಷ್ಠರು. ನಾಡು–ನುಡಿ ಅವರು ರಚಿಸಿದ ಕವನಗಳು ಕನ್ನಡಿಗರ ಹೃದಯದಲ್ಲಿ ಇಂದಿಗೂ ಅಮರವಾಗಿವೆ’ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಸ್ಮರಿಸಿದರು.
ಇಲ್ಲಿನ ಶಿವಬಸವ ನಗರದ ಕಾರಂಜಿ ಮಠದಲ್ಲಿ ಎಸ್.ಡಿ. ಇಂಚಲ ಸ್ಮಾರಕ ಸಮಿತಿ ಹಾಗೂ ಜಿ.ಎ. ಸಂಯುಕ್ತ ಪದವಿಪೂರ್ವ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಸ್ಮಾರಕ ಉಪನ್ಯಾಸ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬೆಳಗಾವಿ ಜಿಲ್ಲೆ ಇಂತಹ ಹಲವು ಶ್ರೇಷ್ಠ ಕವಿಗಳನ್ನು ನೀಡಿದೆ. ಇಲ್ಲಿ ಭಾಷಾ ದ್ವೇಷವಿಲ್ಲ. ರಾಜಕೀಯ ಹಿತಾಸಕ್ತಿಗಳಿಂದ ಸೂಕ್ಷ್ಮ ಹಾಗೂ ಸಂವೇದನಾಶೀಲ ಪ್ರದೇಶವಾಗುತ್ತಿದೆ’ ಎಂದರು.
‘ಗಡಿ ಜಿಲ್ಲೆಯಲ್ಲಿ ಕನ್ನಡ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಪ್ರಾಧಿಕಾರ ದಿಟ್ಟ ಕ್ರಮಗಳನ್ನು ಕೈಗೊಳ್ಳಲಿದೆ. ಇಲ್ಲಿಯ ಕನ್ನಡ ಸಂಘ–ಸಂಸ್ಥೆಗಳ ಪುನಶ್ಚೇತನಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗುವುದು’ ಎಂದು ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ‘ಗಡಿ ಜಿಲ್ಲೆಯಲ್ಲಿ ಇಂಚಲರು ತಮ್ಮ ಸಾಹಿತ್ಯ ಸೇವೆ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದರು’ ಎಂದು ನೆನೆದರು. ‘ಗಡಿ ಅಭಿವೃದ್ಧಿ ಪ್ರಾಧಿಕಾರವು ಬೆಳಗಾವಿಯತ್ತ ಹೆಚ್ಚಿನ ಗಮನಹರಿಸಿ ರಚನಾತ್ಮಕ ಕಾರ್ಯಗಳನ್ನು ಮಾಡಬೇಕು’ ಎಂದು ಸೂಚಿಸಿದರು.
ಸಾಹಿತಿ ಬಿ.ಎಸ್. ಗವಿಮಠ, ‘ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿವೆ. ಅಭಿವೃದ್ಧಿ ಕಾರ್ಯಗಳು ಆಮೆಗತಿಯಲ್ಲಿ ನಡೆದಿವೆ. ಇಲ್ಲಿಯ ಕವಿ– ಕಲಾವಿದರು ಹಲವಾರು ನೆಲೆಗಳಲ್ಲಿ ವಂಚಿತರಾಗಿದ್ದಾರೆ. ಪ್ರಶಸ್ತಿ ಮೊದಲಾದ ಹಲವಾರು ನೆಲೆಗಳಲ್ಲಿ ಅವರನ್ನು ಪರಿಗಣಿಸಲಾಗುತ್ತಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರ ನ್ಯಾಯ ಒದಗಿಸಿಕೊಡಬೇಕು’ ಎಂದು ಕೋರಿದರು.
ವಾಸಂತಿ ಮೇಳೇದ ಅವರ ‘ಸೆರಗಿನ ಸಿರಿ’ ಕಾವ್ಯ ಕೃತಿಗೆ 2019ನೇ ಸಾಲಿನ ಹಾಗೂ ಯಮುನಾ ಕಂಬಾರ ಅವರ ‘ಪ್ರೀತಿ ಎಂದರೆ’ ಕಾವ್ಯ ಕೃತಿಗೆ 2020ನೇ ಸಾಲಿನ ಎಸ್.ಡಿ. ಇಂಚಲ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.