ಕಾಗವಾಡ: ಚುನಾವಣೆಗಿಂತ ಮುಂಚಿತವಾಗಿ ನಾನು ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದಕ್ಕೆ ತಕ್ಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.
ತಾಲ್ಲೂಕಿನ ಮಂಗಸೂಳಿ ಗ್ರಾಮದ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ನೀರಾವರಿ ನಿಗಮದ ವತಿಯಿಂದ ಕೈಗೆತ್ತಿಕೊಂಡ ₹ 4.50 ಕೋಟಿ ವೆಚ್ಚದ ಸಮುದಾಯ ಭವನ ಹಾಗೂ ಮೂಲ ಸೌಲಭ್ಯಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಮಂಗಸೂಳಿ ಮಲ್ಲಯ್ಯ ದೇವಸ್ಥಾನವು ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ. ದೇವರ ದರ್ಶನಕ್ಕೆ ದಿನವೂ ಸಾವಿರಾರು ಭಕ್ತರು ಬರುತ್ತಾರೆ. ಭಕ್ತರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಅನುದಾನ ನೀಡಲಾಗಿದೆ. ಈ ಭಾಗದಲ್ಲಿಯೇ ಮಾದರಿ ವ್ಯವಸ್ಥೆಯುಳ್ಳ ದೇವಸ್ಥಾನವಾಗಿ ಮಾರ್ಪಾಡು ಮಾಡಲಾಗುವುದು ಎಂದರು.
ದೇವಾಲಯದ ಮುಂದಿರುವ ಕೆರೆಯಲ್ಲಿ 12 ತಿಂಗಳೂ ನೀರು ಇರುವಂತೆ ಮಾಡಿ, ಭಕ್ತರ ವಿಹಾರಕ್ಕಾಗಿ ಎರಡು ಬೋಟ್ಗಳನ್ನು ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ನೀಡಲಾಗಿದೆ ಎಂದರು.
ಮಂಗಸೂಳಿ ಗ್ರಾಮದಲ್ಲಿ ಕೂಡ ಒಂದು ಪದವಿ ಮಹಾವಿದ್ಯಾಲಯ, ಪಾಲಿಟೆಕ್ನಿಕ್ ಮಹಾವಿದ್ಯಾಲಯ ಜೊತೆಗೆ ಅಗ್ನಿಶಾಮಕ ಕೇಂದ್ರವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.